ಅಥಣಿ: ದೂರು ಕೊಡಲು ಹೋದ ದಲಿತ ಮಹಿಳೆಗೆ ಅವಾಚ್ಛವಾಗಿ ನಿಂದಿಸಿದ್ದಲ್ಲದೆ, ಜಾತಿ ನಿಂದನೆ ಮಾಡಿದ ಅಥಣಿ ಡಿಎಸ್ಪಿ ಪ್ರಶಾಂತ್ ಮುನ್ನೋಳ್ಳಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ದಲಿತ ಸಂಘರ್ಷ ಸಮಿತಿಯ (ಭೀಮವಾದ) ಅಥಣಿ ತಾಲೂಕು ಘಟಕದ ಮಹಿಳಾ ಅಧ್ಯಕ್ಷೆೆ ಗಂಗಾ ಮಾದರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಅಥಣಿ ಪಟ್ಟಣದ ಪ್ರತಿಷ್ಠಿಯ ಆಸ್ಪತ್ರೆೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ದಲಿತ ಮಹಿಳೆಯೊಬ್ಬಳಿಗೆ ಅಲ್ಲಿಯೇ ಕೆಲಸ ಮಾಡುತ್ತಿದ್ದ ವೈದ್ಯನೊಬ್ಬ ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಕೊನೆಗೆ ಮದುವೆಯಾಗುವುದಿಲ್ಲ ಎಂದು ಹೇಳಿ ಪರಾರಿಯಾಗಿದ್ದಾನೆ.
ಈ ಕುರಿತು ನೊಂದ ಮಹಿಳೆಯು ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಡಿಎಸ್ಪಿ ಪ್ರಶಾಂತ್ ಮುನ್ನೋಳಿ ಆ ಮಹಿಳೆಗೆ ಬಾಯಿಗೆ ಬಂದಂತೆ ಬೈದು, ಜಾತಿಯ ಹೆಸರಿನಲ್ಲಿ ನಿಂದಿಸಿದ್ದಾರೆ. ಈ ವಿಷಯವನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆೆ ತಂದಾಗ, ಕೂಡಲೇ ಡಿಎಸ್ಪಿ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆಗೊಳಪಡಿಸಬೇಕೆಂದು ಆದೇಶಿಸಿದರು.
ಆ ಪ್ರಕಾರ, ಚಿಕ್ಕೋಡಿ ಡಿಎಸ್ಪಿ ನೇತೃತ್ವದ ತಂಡ ಅಥಣಿ ಡಿಎಸ್ಪಿ ಪ್ರಶಾಂತ್ ಮುನ್ನೋಳಿ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆಗೊಳಪಡಿಸಿತು. ತನಿಖೆ ವೇಳೆ ನೊಂದ ಮಹಿಳೆಯಿಂದ ಹೇಳಿಕೆಯನ್ನೂ ಪಡೆಯಲಾಗಿತ್ತು. ಆದರೆ ಈವರೆಗೂ ಡಿಎಸ್ಪಿ ಬಂಧನ ಅಥವಾ ಅಮಾನತ್ತುವಾಗಲಿ, ನೊಂದ ಮಹಿಳೆಗೆ ಸಾಂತ್ವನವಾಗಲೀ ಯಾರೂ ಹೇಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾರ್ವಜನಿಕ ಜೀವನದಲ್ಲಿ ನಾಗರಿಕರಿಗೆ ಅನ್ಯಾಯವಾದಾಗ ಆರಕ್ಷಕರ ಮೊರೆ ಹೋಗುತ್ತಾರೆ. ಆದರೆ ಆರಕ್ಷಕರೇ ಭಕ್ಷಕರಂತೆ ವರ್ತನೆ ಮಾಡಿದರೆ ನ್ಯಾಯಕ್ಕಾಗಿ ಯಾರ ಮೊರೆ ಹೋಗಬೇಕು? ಆದ್ದರಿಂದ ದಲಿತರು, ಬಡವರ ಏಳ್ಗೆಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಜನಮಾನಸಲ್ಲಿ ನೆಚ್ಚಿನ ಸಿಎಂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಡಿಎಸ್ಪಿ ಪ್ರಶಾಂತ್ ಮುನ್ನೋಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಆ ಮೂಲಕ ದಲಿತ ಮಹಿಳೆಗೆ ಆದ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಕೋಟ್
ಡಿಎಸ್ಪಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿ ತಿಂಗಳುಗಳೇ ಕಳೆದರೂ ಈವರೆಗೂ ಬಂಧಿಸಿಲ್ಲ. ನಮ್ಮ ಕಾನೂನು ವ್ಯವಸ್ಥೆೆಯಲ್ಲಿ ಜನರಿಗೊಂದು ನ್ಯಾಯ ಪೊಲೀಸರಿಗೊಂದು ನ್ಯಾಯ ಇದೆಯೇ? ಅಥಣಿಯಲ್ಲಿ ಸದ್ಯದ ಪರಿಸ್ಥಿತಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ. ದಲಿತ ಮಹಿಳೆ ಮೇಲೆ ಆದ ಅನ್ಯಾಯದ ಕುರಿತು ಎಲ್ಲರೂ ಧ್ವನಿ ಎತ್ತಬೇಕು.
- ಗಂಗಾ ಮಾದರ
ದಸಂಸ ತಾಲೂಕು ಮಹಿಳಾ ಅಧ್ಯಕ್ಷೆೆ