ಬಿಜೆಪಿ ನಾಯಕರಿಗೆ ಸಚಿವ ರಾಮಲಿಂಗಾ ರೆಡ್ಡಿ ಸವಾಲ್ !
ಬೆಂಗಳೂರು: ಇಂದು ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ ಪರೀಕ್ಷೆಗೆ ಜನಿವಾರ, ಮಾಂಗಲ್ಯ, ಕಾಲುಂಗುರ, ಕೈಬಳೆ, ತಿಲಕ ಎಲ್ಲವನ್ನು ನಿಷೇಧಿಸಿರುವುದನ್ನು ವಿಶ್ವ ಹಿಂದೂ ಪರಿಷತ್ ರವರೇ ಖಂಡಿಸಿರುವುದನ್ನು ಪತ್ರಿಕೆಯಲ್ಲಿ ಓದಿದೆ.
ಈ ಬಗ್ಗೆ ಬಿಜೆಪಿ ಅವರು ಮೋದಿ ಜೀ ಅವರನ್ನು ದೂಷಿಸಿಸುತ್ತಾರೆಯೇ? ಅಥವಾ ಮೋದಿಜೀ ಅವರಿಗೆ ಪತ್ರ ಬರೆದು ಮಾರ್ಪಾಡಿಗೆ ಕೇಳುತ್ತಾರೆಯೇ? ಇಲ್ಲ ರಾಜ್ಯದ್ಯಾಂತ ಮೋದಿ ಜೀ ಕೇಂದ್ರ ಸರ್ಕಾರದ ಈ ನಡೆಯನ್ನು ಖಂಡಿಸಿ ಚಳುವಳಿ/ ಜಾಥಾ/ ಮೆರವಣಿಗೆ ನಡೆಸುತ್ತಾರೆಯೇ ಎಂಬುದನ್ನು ಕೂತೂಹಲದಿಂದ ಎದುರು ನೋಡುತ್ತಿದ್ದೇವೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನಾನು ಈ ಹಿಂದೆ ನಮ್ಮ ರಾಜ್ಯದ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದು ಸಿಇಟಿ ಪರೀಕ್ಷೆಯ ತಪಾಸಕರು ವಿದ್ಯಾರ್ಥಿಯ ಜನಿವಾರ ತೆಗೆಸಿರುವ ಪ್ರಕರಣವನ್ನು ಖಂಡಿಸಿ ಹಾಗೂ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಪರೀಕ್ಷಾ ಮಾರ್ಗಸೂಚಿಯ ವಸ್ತ್ರಸಂಹಿತೆ ನೀತಿಯಲ್ಲಿ ಅವಶ್ಯಕ ಬದಲಾವಣೆ ಮಾಡುವಂತೆ ಕೋರಿದ್ದೆ. ಅಂದು ಸದರಿ ಪ್ರಕರಣದಲ್ಲಿ ಬಿಜೆಪಿಗರು ವಿನಾಕಾರಣ ರಾಜಕಾರಣ ಮಾಡುತ್ತಾ, ಸಿದ್ದರಾಮಯ್ಯ ಸರ್ಕಾರದ ಕುರಿತು ಹಿಂದೂ ವಿರೋಧಿ ಎಂದು ಅಪಪ್ರಚಾರ ಮಾಡಿದರು ಎಂದು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರದ ಪರೀಕ್ಷಾ ಪ್ರಾಧಿಕಾರಗಳೇ ಮಾಡಿರುವ ಕಾನೂನು ಹಾಗೂ ವಸ್ತ್ರ ಸಂಹಿತೆ ನಿಯಮಗಳು ಭಾರತದಾದ್ಯಂತ ಅನ್ವಯವಾಗುತ್ತವೆ. ಈ ನಿಯಮಕ್ಕೂ ಸಿದ್ದರಾಮಯ್ಯ ಸರ್ಕಾರಕ್ಕೂ ಅಥವಾ ನಿಯಮ ಪಾಲನೆ ಮಾಡಿದ ಪರೀಕ್ಷಾ ಕೇಂದ್ರದ ತಪಾಸಕರಿಗೂ ಯಾವ ರೀತಿಯ ಸಂಬಂಧವಿಲ್ಲದಿದ್ದರೂ ರಾಜಕೀಯ ತೆವಲಿನಿಂದ ದಾರಿ ದಾರಿಯಲ್ಲಿ ಬಾಯಿಬಡಿದುಕೊಂಡಿದ್ದೇ ಬಿ.ಜೆ.ಪಿ ಅವರ ಸಾಧನೆ ಎಂದು ವ್ಯಂಗ್ಯವಾಡಿದ್ದಾರೆ.
ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ, ಧರ್ಮದ ಹೆಸರಿನಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡತ್ತಾ, ಕೊಳಕು ರಾಜಕೀಯ ಪೋಷಿಸುತ್ತಾ ಇರುವ ರಾಜ್ಯದ ಬಿಜೆಪಿ ನಾಯಕರು ಮೋದಿ ಜೀ ಅವರನ್ನು ಪ್ರಶ್ನಿಸುವ ಎದೆಗಾರಿಕೆ ತೋರುವರಾ? ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.