ಮುಂಗಾರು ಮಳೆಯ ಆರ್ಭಟ ಶುರುವಾಗುತ್ತಿದ್ದಂತೆ ಕೇಂದ್ರಸರ್ಕಾರ ದೇಶದ ರೈತರಿಗೆ ಬಂಪರ್ ಸುದ್ದಿ ನೀಡಿದೆ. ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ಇಂದು ಖಾರೀಫ್ ಹಂಗಾಮಿನ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಒಪ್ಪಿಗೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಖಾರೀಫ್ ಹಂಗಾಮಿನ 14 ಬೆಳೆಗಳ ಕನಿಷ್ಟ ಬೆಂಬಲ ಬೆಲೆ ಏರಿಕೆ ಮಾಡಲು ಕ್ಯಾಬಿನೆಟ್ ತೀರ್ಮಾನಿಸಿದೆ. ರೈತರ ಬೆಳೆಯ ಖರ್ಚಿನ ಮೇಲೆ ಶೇ.50ರಷ್ಟು ಲಾಭ ಬರುವಂತೆ MSP ನಿಗದಿ ಮಾಡಿದ್ದು, 2.07 ಲಕ್ಷ ಕೋಟಿ ರೂಪಾಯಿ ರೈತರ ಬೆಳೆಗಳನ್ನು ಖರೀದಿ ಮಾಡಲಾಗುತ್ತಿದೆ.
ಏನಿದು ಖಾರಿಫ್ ಬೆಳೆಗಳು?
ಖಾರಿಫ್ ಬೆಳೆಗಳು ಭಾರತದಲ್ಲಿ ಮಾನ್ಸೂನ್ ಬೆಳೆಗಳಾಗಿವೆ. ಸಾಮಾನ್ಯವಾಗಿ ಜೂನ್ನಿಂದ ಸೆಪ್ಟೆಂಬರ್, ಅಕ್ಟೋಬರ್ ಮಳೆಗಾಲದಲ್ಲಿ ಬೆಳೆಯುವ ಬೆಳೆಗಳಿಗೆ ಖಾರಿಫ್ ಎನ್ನಲಾಗುತ್ತೆ. ಆನಂತರದಲ್ಲಿ ಬೆಳೆಯುವ ಹಿಂಗಾರು ಬೆಳೆಗಳಿಗೆ ರಬಿ ಎಂದು ಕರೆಯಲಾಗುತ್ತೆ.
ಕನಿಷ್ಠ ಬೆಂಬಲ ಬೆಲೆ (MSP) ಏರಿಕೆ ಎಷ್ಟು?
ಭತ್ತ – MSP ಕ್ವಿಂಟಾಲ್ಗೆ 2,369 ರೂ.ಗೆ ಏರಿಕೆ
ರಾಗಿ – MSP ಕ್ವಿಂಟಾಲ್ಗೆ 4,886 ರೂ.ಗೆ ಏರಿಕೆ
ಜೋಳ – MSP ಕ್ವಿಂಟಾಲ್ಗೆ 2,400 ರೂ.ಗೆ ಏರಿಕೆ
ತೊಗರಿಬೇಳೆ – MSP ಕ್ವಿಂಟಾಲ್ಗೆ 8,000 ರೂ.ಗೆ ಏರಿಕೆ
ಮೀಡಿಯಂ ಹತ್ತಿ – MSP ಕ್ವಿಂಟಾಲ್ಗೆ 7,710 ರೂ.ಗೆ ಏರಿಕೆ
ಲಾಂಗ್ ಹತ್ತಿ – MSP ಕ್ವಿಂಟಾಲ್ಗೆ 8,110 ರೂ.ಗೆ ಏರಿಕೆ
ಹೆಸರುಬೇಳೆ – MSP ಕ್ವಿಂಟಾಲ್ಗೆ 7,800 ರೂ.ಗೆ ಏರಿಕೆ
ಹೆಸರುಕಾಳು – MSP ಕ್ವಿಂಟಾಲ್ಗೆ 8,768 ರೂ.ಗೆ ಏರಿಕೆ
ಶೇಂಗಾ–ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್ಗೆ 7,263 ರೂ.ಗೆ ಏರಿಕೆ
ಸೂರ್ಯಕಾಂತಿ ಬೀಜ–MSP ಕ್ವಿಂಟಾಲ್ಗೆ 7,721 ರೂ.ಗೆ ಏರಿಕೆ
ಸಾಸಿವೆ – MSP 9,846 ರೂ.ಗೆ ಏರಿಕೆ
ರೈತರ ಸಾಲಕ್ಕೂ ರಿಯಾಯಿತಿ!
ಖಾರೀಫ್ ಹಂಗಾಮಿನ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಏರಿಕೆಯ ಜೊತೆಗೆ ಕೇಂದ್ರಸರ್ಕಾರ ದೇಶದ ರೈತರಿಗೆ ಮತ್ತೊಂದು ಗುಡ್ನ್ಯೂಸ್ ಕೊಟ್ಟಿದೆ. ರೈತರಿಗೆ ಅಡಮಾನ ಇಲ್ಲದೇ 2 ಲಕ್ಷ ರೂಪಾಯಿವರೆಗೂ ಸಾಲ ನೀಡಿಕೆಗೆ ಕೇಂದ್ರಸರ್ಕಾರ ಒಪ್ಪಿಗೆ ನೀಡಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 3 ಲಕ್ಷ ರೂಪಾಯಿವರೆಗೆ ಸಾಲ ನೀಡಿಕೆ ಮುಂದುವರಿಕೆ ಮಾಡಲಾಗಿದೆ. ಅಲ್ಲದೇ ಸಕಾಲಕ್ಕೆ ಸಾಲ ಮರುಪಾವತಿ ಮಾಡಿದ ರೈತರಿಗೆ ಶೇಕಡಾ 3ರಷ್ಟು ಬಡ್ಡಿ ರಿಯಾಯಿತಿ ಸಿಗಲಿದೆ.