ಬೆಂಗಳೂರು: ಬಿಹಾರದಿಂದ ಕರೆತಂದಿದ್ದ ಬಾಲಕಿಯನ್ನು ಕೊಲೆ ಮಾಡಿ ಸೂಟ್ ಕೇಸ್ ನಲ್ಲಿ ತುಂಬಿ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಳು ಜನ ಆರೋಪಗಳನ್ನು ಬಿಹಾರದಲ್ಲಿ ಬಂಧಿಸಿದ್ದಾರೆ.
ಮೇ. 21 ರಂದು ಬೆಂಗಳೂರು ಹೊರವಲಯದ ಆನೇಕಲ್ ಬಳಿಯ ಹಳೇ ಚಂದಾಪುರ ರೈಲ್ವೇ ಟ್ರ್ಯಾಕ್ ಮೇಲೆ ಸೂಟ್ ಕೇಸ್ ಪತ್ತೆಯಾಗಿತ್ತು. ಅದನ್ನು ಪರಿಶೀಲನೆ ನಡೆಸಿದಾಗ, ಅದು 17 ವರ್ಷದ ಬಾಲಕಿಯ ಶವ ಎಂದು ಗೊತ್ತಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೂರ್ಯನಗರ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದರು.
ಬಿಹಾರ ಮುಲದ ಕೌಶಿಕ್ ಕುಮಾರ್ ಎಂಬಾತ ಬೆಂಗಳೂರಿನಲ್ಲಿ ನೆಲೆಸಿದ್ದ. ಕೆಲ ದಿನಗಳ ಹಿಂದೆ ತನ್ನ ಊರಿಗೆ ಹೋಗಿದ್ದ. ಅಲ್ಲಿದ್ದ ಎರಡೇ ದಿನದಲ್ಲಿ 17 ವರ್ಷದ ತನ್ನ ಪಕ್ಕದ ಗ್ರಾಮದ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿದ್ದ. ಅನಂತರ ಆಕೆಯನ್ನು ಮೇ. 19 ರಂದು ಬೆಂಗಳೂರಿಗೆ ಕರೆತಂದಿದ್ದ. ಇಡೀ ದಿನ ಆಕೆಯನ್ನು ಬೆಂಗಳೂರು ಸುತ್ತಾಡಿಸಿ, ರಾತ್ರಿ ಸ್ನೇಹಿತ ಮುಕೇಶ್ ಎಂಬಾತನ ಮನೆಗೆ ಕರೆದೊಯ್ದಿದ್ದ. ಆಕೆ ಲೈಂಗಿಕ ಕ್ರಿಯೆಗೆ ಸಹಕಾರ ನೀಡದ ಬೆನ್ನಲ್ಲೇ ಮರದುದಿನ ಆಕೆಯ ತಲೆಗೆ ರಾಡ್ ನಿಂದ ಹೊಡಿದು ಕೊಲೆ ಮಾಡಿದ್ದ ಎನ್ನಲಾಗಿದೆ.
ಬಾಲಕಿ ಮೃತಪಟ್ಟ ನಂತರ ಆಕೆಯ ಶವವನ್ನು ಸಾಗಿಸಲು ಸ್ನೇಹಿತರ ಸಹಾಯ ಪಡೆದುಕೊಂಡಿದ್ದು,
ಏಳು ಜನ ಆರೋಪಿಗಳು ಸೇರಿ ಶವವನ್ನು ಸೂಟ್ ಲೇಸ್ ಗೆ ತುಂಬಿದ್ದರು. ಅನಂತರ ಚಂದಾಪುರ ಸಮೀಪದ ರೈಲ್ವೇ ಹಳಿಯ ಮೇಲೆ ಬಿಸಾಕಿ, ರೈಲಿನಿಂದ ಬಿಸಾಕಲಾಗಿದೆ ಎಂದು ಬಿಂಬಿಸುವ ಪ್ರಯತ್ನ ನಡೆಸಿದ್ದರು. ಅವರು ಶವ ಸಾಗಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನ ಆಧರಿಸಿ ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿದ್ದು, ಬಿಹಾರದಲ್ಲಿ ತಲೆ ಮರೆಸಿಕೊಂಡಿದ್ದವರನ್ನು ಬಂಧಿಸಿದ್ದಾರೆ.