ಉಪಯುಕ್ತ ಸುದ್ದಿ

ತಿರುಪತಿಗೆ ತೆರಳುವ ಭಕ್ತರಿಗೆ ಗುಡ್ ನ್ಯೂಸ್ : ಸೇವೆಗೆ ಸಿದ್ಧವಾಯ್ತು ಕೃಷ್ಣ ರಾಜೇಂದ್ರ ಕಲ್ಯಾಣ ಮಂಟಪ

Share It

ಸೆಪ್ಟಂಬರ್ ನಲ್ಲಿ VIP ಬ್ಲಾಕ್, ಕಲ್ಯಾಣಿ, ದೇವಸ್ಥಾನದ ಉದ್ಘಾಟನೆ

ಸಿಎಂ ಸಿದ್ದರಾಮಯ್ಯ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಕಾರ್ಯಕ್ರಮದಲ್ಲಿ ಭಾಗಿ

ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರಿಂದ ಉದ್ಘಾಟನೆ

500 ಆಸನ ಸಾಮರ್ಥ್ಯದ ಸುಸಜ್ಜಿತ ಕಲ್ಯಾಣ ಮಂಟಪ

ತಿರುಪತಿ: ತಿರುಮಲದಲ್ಲಿ ನೂತನವಾಗಿ ನಿರ್ಮಿಸಿರುವ ಕರ್ನಾಟಕ ಛತ್ರ (ಮೈಸೂರು ಕಾಂಪ್ಲೆಕ್ಸ್‌) “ಶ್ರೀ ಕೃಷ್ಣರಾಜೇಂದ್ರ ಒಡೆಯರ್ ಬ್ಲಾಕ್” ಕಲ್ಯಾಣ ಮಂಟಪವನ್ನು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ ಅವರು, ತಿರುಮಲದಲ್ಲಿ ನಿರ್ಮಾಣವಾಗಿರುವ 36 ಕೊಠಡಿಗಳ ವಿಐಪಿ ಬ್ಲಾಕ್, ಕಲ್ಯಾಣಿ ಮತ್ತು ಕರ್ನಾಟಕ ಛತ್ರದ ದೇವಸ್ಥಾನದ ಉದ್ಘಾಟನೆ ಸೆಪ್ಟೆಂಬರ್ ನಲ್ಲಿ ನಡೆಯಲಿದೆ. 36 ಸುಸಜ್ಜಿತ ಕೊಠಡಿಗಳ VIP ಬ್ಲಾಕ್ ಕಾಮಗಾರಿ ಈಗಾಗಲೇ ಬಹುತೇಕ ಪೂರ್ಣವಾಗಿದೆ. ಅಂತಿಮ ಹಂತದ ಕೆಲಸ ಪ್ರಗತಿಯಲ್ಲಿವೆ. ಸೆಪ್ಟೆಂಬರ್ ಗೆ ಪೂರ್ಣಗೊಳ್ಳಲಿದ್ದು, ಉದ್ಘಾಟನಾ ಸಮಾರಂಭ ನಡೆಯಲಿದೆ.

ಸೆಪ್ಟೆಂಬರ್ ನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಕರ್ನಾಟಕ ಸರಕಾರದಿಂದ ನಿರ್ಮಾಣಗೊಂಡಿರುವ 36 ರೂಮುಗಳ VIP ಬ್ಲಾಕ್, ಕಲ್ಯಾಣಿ ಮತ್ತು ದೇವಸ್ಥಾನದ ಉದ್ಘಾಟನೆ ನಡೆಯಲಿದೆ. ಈ ಮೂಲಕ ಬಹಳ ವರ್ಷಗಳ ಕರ್ನಾಟಕ ಭಕ್ತರ ಕನಸು ನಸಸಾಗಲಿದೆ ಎಂದು ತಿಳಿಸಿದರು.

ಕಲ್ಯಾಣ ಮಂಟಪದ ಉದ್ಘಾಟನೆ: ಈ ಕಲ್ಯಾಣ ಮಂಟಪ 500 ಆಸನಗಳ ಸಾಮರ್ಥ್ಯ ಹಾಗೂ 13 ಕೊಠಡಿಗಳನ್ನು ಒಳಗೊಂಡಿದೆ. ಕರ್ನಾಟಕದಿಂದ ಬಂದು ತಿರುಮಲದಲ್ಲಿ ಮದುವೆ, ನಾಮಕರಣ ಮೊದಲಾದ ಶುಭ ಸಮಾರಂಭಗಳನ್ನು ಆಯೋಜನೆ ಮಾಡುವ ಭಕ್ತರಿಗೆ ಇದು ಲಭ್ಯವಿರಲಿದೆ.

ಶ್ರೀ ಕೃಷ್ಣ ರಾಜೇಂದ್ರ ಒಡೆಯರ್ ಕಲ್ಯಾಣ ಮಂಟಪ ನಿರ್ಮಾಣ ತಿರುಮಲಕ್ಕೆ ಆಗಮಿಸುವ ಕರ್ನಾಟಕದ ಭಕ್ತರ ಅನುಕೂಲತೆಯತ್ತ ರಾಜ್ಯ ಸರ್ಕಾರ ಕೈಗೊಂಡ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಆನ್ ಲೈನ್ ಮೂಲಕ ಬುಕ್ಕಿಂಗ್ ಮಾಡಿಕೊಂಡು ಈ ಸೇವೆಯನ್ನು ಕರ್ನಾಟಕದ ಭಕ್ತರು ಪಡೆದುಕೊಳ್ಳಬಹುದು.

ಸೋಮವಾರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಠಾರಿಯ, ಮುಜರಾಯಿ ಇಲಾಖೆ ಆಯುಕ್ತರಾದ ಎಂ. ವಿ ವೆಂಕಟೇಶ್ ಸೇರಿದಂತೆ ಅನೇಕ ಮುಖಂಡರು  ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.


Share It

You cannot copy content of this page