ಉಪಯುಕ್ತ ಸುದ್ದಿ

ನಗರಸಭೆಯಾಗಲಿದೆಯೇ ಚನ್ನರಾಯಪಟ್ಟಣ: ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪ್ರಸ್ತಾವನೆ ಸಲ್ಲಿಸಿದ ಶಾಸಕ ಸಿ.ಎನ್. ಬಾಲಕೃಷ್ಣ

Share It

ಬೆಂಗಳೂರು: ಚನ್ನರಾಯಪಟ್ಟಣ ಪುರಸಭೆಯನ್ನು ಮೇಲ್ದರ್ಜೆಗೇರಿಸಿ ನಗರಸಭೆಯನ್ನಾಗಿ ರೂಪಿಸುವ ಪಸ್ತಾವನೆಗೆ ಅಂಗೀಕಾರ ನೀಡುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಮನವಿ ಮಾಡಿದರು.

ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದ ಶಾಸಕ ಬಾಲಕೃಷ್ಣ, ಶೀಘ್ರವೇ ಪ್ರಸ್ತಾವನೆಯನ್ನು ಅಂಗೀಕರಿಸಿ, ಈ ಭಾಗದ ಜನತೆಯ ಆಶಯ ಈಡೇರಿಸುವಂತೆ ಮನವಿ ಮಾಡಿದರು. ಚನ್ನರಾಯಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದು, ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ನಗರದ ವ್ಯಾಪ್ತಿಯೂ ವಿಸ್ತಾರವಾಗುತ್ತಿದ್ದು, ನಗರಸಭೆಯನ್ನಾಗಿ ಮಾಡಿದರೆ ಹೆಚ್ಚು ಅಭಿವೃದ್ಧಿ ಕಾಣಲಿದೆ ಎಂದರು.

ಶಾಸಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಜನಾಭಿಪ್ರಾಯ ಮತ್ತು ಜನಪ್ರತಿನಿಧಿಗಳ ಅಭಿಪ್ರಾಯದಂತೆ ನಗರಸಭೆಯನ್ನಾಗಿ ಮಾಡಲು ಕ್ರಮ ವಹಿಸಲಾಗುವುದು. ಕಾನೂನಿನ ವ್ಯಾಪ್ತಿಯಲ್ಲಿ ನಗರಸಭೆಗೆ ಅಗತ್ಯವಾದ ಆದ್ಯತೆಗಳನ್ನು ನೀಡಲು ಸರಕಾರ ಸಿದ್ಧವಿದೆ. ಈ ಕುರಿತು ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿದರು.

ಚನ್ನರಾಯಪಟ್ಟಣಕ್ಕೆ ಸುತ್ತಲಿನ ಮಾರೇನಹಳ್ಳಿ, ಡಿ. ಕಾಳೇನಹಳ್ಳಿ, ನಾಗಸಮುದ್ರ, ಗುಂಡಶೆಟ್ಟಿಹಳ್ಳಿ, ಗದ್ದೆಬಿಂಡೇನಹಳ್ಳಿ, ಜನಿವಾರ, ಹೊಸೂರು, ಕಗ್ಗಲಿಕಾವಲು,ಶೆಟ್ಟಿಹಳ್ಳಿ, ಚಾಮಡಿಹಳ್ಳಿ, ಕೆರೆಚಿಕ್ಕೇನಹಳ್ಳಿ, ಬೆಲಸಿಂದ ಗ್ರಾಮಗಳು ಸೇರಿ 12 ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ತರಲು ತೀರ್ಮಾನಿಸಲಾಗಿದೆ. ಇದಕ್ಕೆ ಈ ಎಲ್ಲ ಗ್ರಾಮಗಳ ಸಾರ್ವಜನಿಕ ಅಭಿಪ್ರಾಯವನ್ನು ಪಡೆಯಲಾಗಿದೆ.


Share It

You cannot copy content of this page