ಬೆಂಗಳೂರು: ಮಂಗಳೂರಿನಲ್ಲಿ ಮರ್ಸಿಡಿಸ್ ಬೆಂಜ್ ವಾಹನದ ತಾತ್ಕಾಲಿಕ ನೋಂದಣಿ ಪತ್ರದ ವಿತರಣೆ ಸಮಯದಲ್ಲಿ ನಡೆದ ಲೋಪದೋಷ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಪ್ಪಿತಸ್ಥರನ್ನು ಅಮಾನತ್ತು ಮಾಡುವಂತೆ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾ ರೆಡ್ಡಿ ಆದೇಶ ಮಾಡಿದ್ದಾರೆ.
ಈ ಮೇಲಿನ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಸಾರಿಗೆ ಸಚಿವರ ಗಮನಕ್ಕೆ ಬಂದ ಕೂಡಲೇ ಸಂಬಂಧಪಟ್ಟವರ ಮೇಲೆ ಸೂಕ್ತ ಶಿಸ್ತಿನ ಕ್ರಮ ತೆಗೆದುಕೊಳ್ಳುವಂತೆ ಆಯುಕ್ತರಿಗೆ ಆದೇಶಿಸಿದ್ದರು. ಅದರಂತೆ, ಪ್ರಕರಣದಲ್ಲಿ ಭಾಗಿಯಾಗಿದ್ದ ಮಂಗಳೂರಿನ ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಸೇರಿದ ನೀಲಪ್ಪ ಕೆ ಹೆಚ್, ಪ್ರಥಮ ದರ್ಜೆ ಸಹಾಯಕರು, ರೇಖಾ ನಾಯಕ್ ಅಧೀಕ್ಷಕರು ಹಾಗೂ ಸರಸ್ವತಿ, ಕೇಂದ್ರ ಸ್ಥಾನಿಯ ಸಹಾಯಕರ ಮೇಲೆ ಕ್ರಮ ಜರುಗಿಸಲಾಗಿದೆ.
ನಿಹಾಲ್ ಅಹಮದ್ ಎಂಬುವವರಿಗೆ ಸೇರಿದ ಮರ್ಸಿಡಿಸ್ ಬೆಂಜ್ ವಾಹನದ ತಾತ್ಕಾಲಿಕ ನೊಂದಣಿ ಸಂಬಂಧ KA51TR005155201617 ಅನ್ನು ರೂ.1,96,95,000 ಗಳಿಗೆ ನೀಡಲಾಗಿದೆ. ಆದರೆ ಈ ಮೌಲ್ಯವನ್ನು ರೂ. 32,15,000 ಗಳೆಂದು ಬದಲಾವಣೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ವಾಹನ ನೋಂದಣಿ ಸಮಯದಲ್ಲಿ ಕಡಿಮೆ ತೆರಿಗೆ ಪಡೆಯಲಾಗಿರುತ್ತದೆ. ಈ ವಹಿವಾಟಿನ ಹಿಂದೆ ಆರ್ಥಿಕ ದುರುಪಯೋಗದ ಹಿನ್ನೆಲೆಯಲ್ಲಿ ಸಾರಿಗೆ ಆಯುಕ್ತರು ಮತ್ತು ಶಿಸ್ತು ಪ್ರಾಧಿಕಾರಗಳಾದ ಆಯುಕ್ತರು ಮೇಲಿನ ಮೂವರನ್ನು ಅಮಾನತು ಮಾಡಿದ್ದಾರೆ.