ಪದೇಪದೆ ಮುಷ್ಕರಕ್ಕೆ ಮುಂದಾಗುವ ಸಾರಿಗೆ ನೌಕರರ ಸಂಘಗಳು : ಅವರೇ ಒಪ್ಪಿದ ನಿಯಮಾವಳಿ ಮೀರಿ ಪ್ರತಿಭಟನೆ ನಡೆಸುವುದು ಸರಿಯೇ?
ಬೆಂಗಳೂರು: ಸಾರಿಗೆ ನಿಗಮಗಳ ನೌಕರರು ಪದೇಪದೆ ಮುಷ್ಕರಕ್ಕೆ ಮುಂದಾಗುತ್ತಿದ್ದು, ಸರಕಾರ ಮತ್ತು ನೌಕರರ ನಡುವಿನ ಹಗ್ಗಜಗ್ಗಾಟ ಅನೇಕ ವರ್ಷಗಳಿಂದಲೂ ನಡೆದುಕೊಂಡೇ ಬರುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಸಾರಿಗೆ ನೌಕರರು ನಡೆಸಲು ಮುಂದಾಗಿರುವ ಪ್ರತಿಭಟನೆ ಕುರಿತು ಇಲ್ಲೊಂದು ವಿಶ್ಲೇಷಣೆಯನ್ನು ನೋಡಬಹುದು.
ಸಾರಿಗೆ ನೌಕರರು ಸರ್ಕಾರಿ ನೌಕರರಲ್ಲ, ಸಾರಿಗೆ ನಿಗಮಗಳ ರೀತಿ ಸರ್ಕಾರದಡಿಯಲ್ಲಿ 62 ಕ್ಕೂ ಹೆಚ್ಚು ನಿಗಮ/ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ. ಒಂದು ಕಾಲದಲ್ಲಿ ಸರಕಾರ ಇಡೀ ನಿಗಮಗಳನ್ನೆಲ್ಲ ಖಾಸಗೀಕರಣ ಮಾಡುವ ಪ್ರಯತ್ನ ನಡೆಸಿತ್ತು. ಆದರೆ, ಕೆಲ ಬದ್ಧತೆಯುಳ್ಳ ಸಾರಿಗೆ ಸಚಿವರು ಸಾರಿಗೆ ವ್ಯವಸ್ಥೆ ಖಾಸಗೀಕರಣವಾಗಬಾರದು ಎಂಬ ಕಾರಣಕ್ಕೆ ನಿಗಮಗಳಾಗಿಯೇ ಉಳಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದೆ.
ಸಾರಿಗೆ ನೌಕರರು ನೇಮಕದ ಸಂದರ್ಭದಲ್ಲಿಯೇ ನಿಗಮ ಮಂಡಳಿಗಳ ನೇಮಕ ಪ್ರಕ್ರಿಯೆಯ ಚೌಕಟ್ಟಿನಡಿಯಲ್ಲಿ ಒಪ್ಪಿ ಸೇವೆಗೆ ಸೇರಿರುತ್ತಾರೆ. ಸಾರಿಗೆ ನೌಕರರ ಬೇಡಿಕೆ ಏನಿದ್ದರೂ ನೀತಿ/ನಿಯಮ ಕಾನೂನಿನ ಚೌಕಟ್ಟಿನಡಿಯಲ್ಲಿ ಇತ್ಯರ್ಥವಾಗಬೇಕು, ಮುಷ್ಕರದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಈಗಾಗಲೇ ಕಳೆದ ಮುಷ್ಕರದ ಸಮಯದಲ್ಲಿ ವಜಾಗೊಂಡ ಸಾವಿರಾರು ನೌಕರರು ಕೋರ್ಟ್ ಕಛೇರಿ ಅಲೆಯುತ್ತಿದ್ದಾರೆ. ಆದ್ದರಿಂದ ಕಾರ್ಮಿಕ ಸಂಘಟನೆಗಳು ನೌಕರರ ಹಿತದೃಷ್ಟಿಯನ್ನು ಕಾಪಾಡುವ ನಿಟ್ಟಿನಲ್ಲಿ ಯೋಚಿಸಿ ಮುಂದಡಿ ಇಡುವುದು ಒಳಿತು.
ಮುಷ್ಕರಕ್ಕೆ ಮುಂದಾಗಿರುವ ನೌಕರರ ಸಂಘಟನೆಗಳು 2020 ರಿಂದ 15% ವೇತನ ಹೆಚ್ಚಳವಾಗಿರುವ, ಪರಿಷ್ಕರಣೆಯ 38 ತಿಂಗಳ ಬಾಕಿ ಹಣ ಪಾವತಿ ಮಾಡಬೇಕು. 2024 ರಿಂದ ಜಾರಿಗೆ ಬರುವಂತೆ ದಿನಾಂಕ 31-12-2023 ರಲ್ಲಿನ ಮೂಲವೇತನಕ್ಕೆ 25% ಏರಿಕೆ ಮಾಡಿ ವೇತನ ಹೆಚ್ಚಳ ನೀಡಬೇಕು. 4 ವರ್ಷಗಳಿಗೊಮ್ಮೆ ವೇತನ್ ಪರಿಷ್ಕರಣೆ ಮಾಡುವ ಪದ್ಧತಿ ಕಡ್ಢಾಯವಾಗಿ ನಿಲ್ಲಬೇಕು, ಸರ್ಕಾರಿ ನೌಕರರಿಗೆ ಸಮಾನವಾದ ವೇತನ ನೀಡಬೇಕು, ಕಾರ್ಮಿಕ ಸಂಘಟನೆಗಳಿಗೆ ಚುನಾವಣೆ ನಡೆಸಬೇಕು ಎಂಬುದಾಗಿ ಬೇಡಿಕೆ ಸಲ್ಲಿಸಿದ್ದು, ಒಂದೊಂದು ಸಂಘಟನೆಯೂ ಒಂದೊಂದು ರೀತಿಯ ಬೇಡಿಕೆಗಳನ್ನು ಸರಕಾರದ ಮುಂದಿಡುತ್ತಿದ್ದು, ಇದು ಸರಕಾರಕ್ಕೆ ತಲೆನೋವಾಗಿದೆ.
ಸರ್ಕಾರದ ನಿಲುವೇನು?
ಸಾರಿಗೆ ಸಿಬ್ಬಂದಿಯ ಶ್ರಮ ಮತ್ತು ಬದ್ಧತೆ ಪ್ರಶ್ನಾತೀತ ಎಂಬುದನ್ನೇ ಹೇಳುತ್ತಲೇ ಸರಕಾರ ಈ ಮುಷ್ಕರದ ಕುರಿತಂತೆ ಗಟ್ಟಿ ನಿಲುವು ತೆಗೆದುಕೊಂಡಿದೆ. ಈಗಾಗಲೇ ಎಸ್ಮಾ ಜಾರಿ ಮಾಡುವ ಮೂಲಕ ಮುಷ್ಕರ ಮಾಡದಂತೆ ಎಚ್ಚರಿಕೆ ನೀಡಿದೆ. ಕೋವಿಡ್ ಸಮಯದಲ್ಲಿ ಪೂರ್ಣ/ಅಪೂರ್ಣ ಪ್ರಮಾಣದಲ್ಲಿ ಬಸ್ಸುಗಳ ಕಾರ್ಯಾಚರಣೆ ಸ್ಥಗಿತಗೊಂಡಿದ್ದ ಕಾರಣ, ನಾಲ್ಕು ಸಾರಿಗೆ ಸಂಸ್ಥೆಗಳ ಸಮಸ್ತ ಸಿಬ್ಬಂದಿಯ ವೇತನ್ ಹಾಗೂ ಇತರೆ ಭತ್ಯೆಗಳನ್ನು ಸರ್ಕಾರ ಪಾವತಿ ಮಾಡಿದೆ. ಈ ಕಾರಣದಿಂದ 2023 ರ ಮಾರ್ಚ್ 17 ರಿಂದ ಅನ್ವಯವಾಗುವಂತೆ ವೇತನ್ ಪರಿಷ್ಕರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಆರ್ಥಿಕ ನಿಯಮಾವಳಿಯಂತೆ ಅದಕ್ಕೆ ಕಾಲ್ಪನಿಕವಾಗಿ 15% ವೇತನ ಏರಿಕೆಯನ್ನು ಪ್ರತಿ ತಿಂಗಳ ಇಂಕ್ರಿಮೆಂಟ್ ದರ ಇದಕ್ಕೆ ಅನ್ವಯಿಸಿಕೊಂಡು ವೇತನವನ್ನು 2023 ರಿಂದ ಜಾರಿಗೆ ಬರುವಂತೆ ನೀಡಲಾಗಿದೆ. ಅಂದರೆ 2023 ರಿಂದ 2027 ರವರೆಗೆ ನಾಲ್ಕು ವರ್ಷಗಳ ಅವಧಿಯವರೆಗೂ ಇದು ಅನ್ವಯವಾಗುತ್ತದೆ. 2020 ರಿಂ ಅನ್ವಯವಾಗುವಂತಿದ್ದರೆ ಇದಕ್ಕಾಗಿ ಯಾವುದೇ ಪ್ರತ್ಯೇಕ ನಿಧಿಯನ್ನು ಹಿಂದಿನ ಸರ್ಕಾರ ಹಂಚಿಕೆ ಮಾಡಿರುವುದಿಲ್ಲ. ಮತ್ತು ಸರ್ಕಾರದ ಆದೇಶದಲ್ಲಿ ಎಲ್ಲಿಯೂ 2020 ರಿಂದ ಎಂಬುದರ ಬಗ್ಗೆ ಉಲ್ಲೇಖವಿರುವುದಿಲ್ಲ.
ಏಕ ಸದಸ್ಯ ಸಮಿತಿ ಎಷ್ಟು ತಿಂಗಳ ಬಾಕಿ ನೀಡಬೇಕು ಎಂದು ತಿಳಿಸುವುದು ಎಂಬುದನ್ನು ಮಾತ್ರ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿರುತ್ತದೆ ಎಂಬುದು ಸರಕಾರದ ವಾದವಾಗಿದೆ. ಹಿಂದಿನ ಎಲ್ಲಾ ಸರ್ಕಾರಿ ಆದೇಶಗಳಲ್ಲಿಯೂ 2012-2016 ರವರೆಗೆ ವೇತನ ಹೆಚ್ಚಳ ಮಾಡಿದಾಗ 2012 ರಿಂದ ಎಂಬುದಾಗಿ, 2016-2020 ರವರೆಗೆ ವೇತನ ಹೆಚ್ಚಳ ಮಾಡಿದಾಗ 2016 ರಿಂದ ಜಾರಿಗೆ ಬರುವಂತೆ ಎಂದೇ ಸರ್ಕಾರದ ಆದೇಶದಲ್ಲಿ ನಮೂದಾಗಿರುತ್ತದೆ. 2023 ರ ಆದೇಶದಲ್ಲಿ ಮಾತ್ರ 2023 ಮಾರ್ಚ್ ರಿಂದ ಅನ್ವಯವಾಗುವಂತೆ ಎಂದು ನಮೂದಾಗಿದ್ದು, 2020 ರಿಂದ ಜಾರಿಗೆ ಬರುವಂತೆ ಎಂದು ಆದೇಶದಲ್ಲಿ ತಿಳಿಸಿರುವುದಿಲ್ಲ ಎಂಬುದು ಸರ್ಕಾರದ ವಾದ.
ಹಿಂದಿನ ಸರ್ಕಾರದ ಆದೇಶವನ್ನು ನಾವು ಈಗ ಯಾವ ಮಾನದಂಡದ ಮೇಲೆ ಮಾರ್ಪಡಿಸಲು ಸಾಧ್ಯ, ಅದು ತಪ್ಪಾಗುತ್ತದೆ. ಯಾವುದೇ ಸರ್ಕಾರವು ಆದೇಶ ಹೊರಡಿಸಿದ್ದರೂ ಕೆಲವೊಂದು ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡು ಹೊರಡಿಸಲಾಗಿರುತ್ತದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ ಎನ್ನುವುದು ಸರ್ಕಾರದ ನಿಲುವು.
ಅದರಲ್ಲಿಯೂ ಪ್ರಮುಖವಾಗಿ 15% ವೇತನ ಹೆಚ್ಚಳ ಸಾರಿಗೆ ನೌಕರರಿಗೆ ಈ ಎಲ್ಲಾ ವೇತನ ಪರಿಷ್ಕರಣೆ ಅತೀ ಹೆಚ್ಚು, ಸರ್ಕಾರವು ಮೂರು ವರುಷ ತಡವಾಗಿ ವೇತನ ಪರಿಷ್ಕರಣೆ ಮಾಡಿದ್ದರಿಂದ ಇದನ್ನು ಮನಗಂಡು ಇಷ್ಟೊಂದು ಏರಿಕೆ ನೀಡಿರುತ್ತದೆ.
ಹಾಗೂ ಸರಕಾರಿ ನೌಕರರಿಗೆ 5 ವರುಷಕ್ಕೊಮ್ಮೆ ಅಥವಾ ಅದಕ್ಕಿಂತ ಹೆಚ್ಚು ಅವಧಿಗೆ ಮಾಡಿದಾಗಲೂ ಸಹ ವೇತನ ಏರಿಕೆ ಜಾರಿ ಹಿಂದಿನಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ನೀಡುವುದಿಲ್ಲ, ಮುಂದಿನ ದಿನದಿಂದ ಜಾರಿಗೆ ಬರುವಂತೆ ಎಂದೇ ಆದೇಶ ಹೊರಡಿಸಲಾಗುತ್ತದೆ.ಇದನ್ನು ಮನಗಂಡು ಕಾರ್ಮಿಕ ಸಂಘಟನೆಗಳು ಮನವಿ ಮಾಡಬೇಕು ಎಂಬುದು ಸರಕಾರದ ವಾದವಾಗಿದೆ.
ಜತೆಗೆ, ಆರೇಳು ವರ್ಷಗಳಿಂದ ಸಂಪೂರ್ಣ ಸ್ಥಗಿತಗೊಂಡಿದ್ದ ನೇಮಕಾತಿಗೆ ಚಾಲನೆ ನೀಡಿದ್ದೇವೆ, 10,000 ಹೊಸ್ ನೇಮಕಾತಿ, ಇದರಲ್ಲಿ 8 ವರ್ಷಗಳಿಂದ ಅನುಕಂಪದ ಆಧಾರದ ನೌಕರಿ ನೀಡದಿರುವ 1000 ಮೃತ ಅವಲಂಬಿತರು ಇದ್ದಾರೆ. 5,200 ಹೊಸ ಬಸ್ಸುಗಳ ಸೇರ್ಪಡೆ ಮಾಡಲಾಗಿದೆ. ಶಕ್ತಿ ಯೋಜನೆಯಿಂದ ನಿಗಮಗಳಿಗೆ ನಿಜಕ್ಕೂ ಆದಾಯ ಹೆಚ್ಚಳವಾಗಿದೆ, 65% ಪ್ರಯಾಣಿಕರು ಶಕ್ತಿ ಯೋಜನೆಯಡಿಯಲ್ಲಿ ಪ್ರಯಾಣಿಸುತ್ತಿದ್ದಾರೆ. ಆದ್ದರಿಂದ ಸಾರಿಗೆ ನಿಗಮಗಳನ್ನು ಸದೃಢಗೊಳಿಸಲು ನಾವು ಕ್ರಮವಹಿಸುತ್ತಿದ್ದೇವೆ ಎನ್ನುವುದು ಸರ್ಕಾರದ ವಾದವಾಗಿದೆ.