ನೆಲಮಂಗಲ: ನಿರ್ಮಾಣ ಹಂತದಲ್ಲಿದ್ದ ಮನೆಯ ಸೆಂಟ್ರಿಂಗ್ ಕಳಚುವ ವೇಳೆ ಆಯತಪ್ಪಿ ಎರಡನೇ ಮಹಡಿಯಿಂದ ಬಿದ್ದು ತೀವ್ರ ರಕ್ತಸ್ರಾವದಿಂದ ಕಾರ್ಮಿಕ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ನೆಲಮಂಗಲದ ಗೆಜ್ಜಗದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಗೋಪಾಲಪುರ ಗ್ರಾಮದ ಬೀರಪ್ಪ (34) ಮೃತ ಕಾರ್ಮಿಕ. ಈತ 8 ವರ್ಷದಿಂದ ಈ ಭಾಗದಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ. ಬೀರಪ್ಪನಿಗೆ ಹೆಂಡತಿ, ಇಬ್ಬರು ಮಕ್ಕಳು ಇದ್ದು, ಬಡ ಕುಟುಂಬದಲ್ಲಿ ಜೀವನ ನಡೆಸುತ್ತಿದ್ದರು.
ಇನ್ನೂ ಮೃತ ಬೀರಪ್ಪ ನೂರಾರು ಜನ ಕಾರ್ಮಿಕರಿಗೆ ಆಸರೆಯಾಗಿದ್ದ. ಎಲ್ಲರಿಗೂ ಕೆಲಸ ಕೊಡಿಸಿ ಆಸರೆಯಾಗಿದ್ದ ಬೀರಪ್ಪ ಮೃತಪಟ್ಟ ವಿಚಾರ ತಿಳಿದು ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಜಮಾಯಿಸಿದ್ದಾರೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.