ಪತಿ, ಮಗು ನಿರ್ಲಕ್ಷ್ಯಿಸಿ, ವಿಚ್ಛೇದನದ ನಂತರ ವಾಪಸ್ ಬಂದ ಪತ್ನಿ: ಮನವಿ ತಿರಸ್ಕರಿಸಿದ ಹೈಕೋರ್ಟ್
ಬೆಂಗಳೂರು: ಪತಿ ಮತ್ತು ಕುಟುಂಬದವರನ್ನು ಹೀಯಾಳಿಸಿ, ಮಗುವನ್ನು ತ್ಯಜಿಸಿ ವಿಚ್ಛೇದನ ಪಡೆದುಕೊಂಡಿದ್ದ ಸಹಾಯಕ ಪ್ರಾಧ್ಯಾಪಕಿಯೊಬ್ಬರು, ಇದೀಗ ತಮಗೆ ಗಂಡ, ಮಗು ಬೇಕೆಂದು ಮಾಡಿದ್ದ ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಖಾಸಗಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು, ಪತಿಯ ಪೋಷಕರನ್ನು ಪಿಶಾಚಿಗಳು, ಮೂರ್ಖರು ಮತ್ತು ದುಷ್ಟರು ಎಂದು ನಿಂದಿಸಿದ್ದಲ್ಲದೇ, ಹೆತ್ತ ಮಗಳನ್ನು ಹಲವು ವರ್ಷಗಳ ಕಾಲ ದೂರವಿಟ್ಟಿದರು. ಅಂತೆಯೇ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇಧನವನ್ನು ಪಡೆದುಕೊಂಡು, 20 ಸಾವಿರ ಮಾಸಿಕ ನಿರ್ವಹಣಾ ವೆಚ್ಚ ಪಡೆಯುತ್ತಿದ್ದರು. ಇದೀಗ, ಗಂಡ ಮತ್ತು ಮಗು ಬೇಕೆಂದು ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದು, ಅರ್ಜಿ ವಜಾಗೊಂಡಿದೆ.
ಪತಿ ಮತ್ತು ಮಗುವನ್ನು ತ್ಯಜಿಸಿದ ಬಳಿಕ ನಡೆದ ಹಲವು ಸುತ್ತಿನ ರಾಜಿ ಸಂಧಾನ ಸಭೆಗಳಲ್ಲಿ ಸಾಕಷ್ಟು ಅವಕಾಶವಿದ್ದರೂ ಗಂಡನೊAದಿಗೆ ತೆರಳಲು ಪ್ರಯತ್ನಿಸದ ಪತ್ನಿ, ಮಗುವನ್ನೂ ತನ್ನ ವಶಕ್ಕೆ ಪಡೆಯಲು ಮುಂದಾಗಿಲ್ಲ. ಆದ್ದರಿಂದ ವಿಚ್ಛೇದನ ಮಂಜೂರು ಮಾಡಿರುವ ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ವಿಚ್ಛೇದನ ಮಂಜೂರು ಮಾಡಿರುವುದು ಮತ್ತು ಮಗಳ ಮೇಲಿನ ಹಕ್ಕುಗಳನ್ನು ತನಗೆ ನೀಡಬೇಕು ಎಂದು ಕೋರಿದ್ದ ಸಹಾಯಕ ಪ್ರಾಧ್ಯಾಪಕಿ ಪತ್ನಿ ಮತ್ತು ಮಾಸಿಕ 20 ಸಾವಿರ ರು.ಗಳ ನಿರ್ವಹಣಾ ವೆಚ್ಚ ಪಾವತಿಸುವಂತೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಮಾಡಿರುವ ಆದೇಶ ರದ್ದುಕೋರಿ ಪತಿ ಸಲ್ಲಿಸಿದ್ದ ಎರಡೂ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಮತ್ತು ಕೆ.ವಿ.ಅರವಿಂದ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಪ್ರಸ್ತುತ ಮಗು ಪತಿಯ ಪೋಷಕರೊಂದಿಗೆ ಬೆಳೆಯುತ್ತಿದ್ದು, ಮಗುವನ್ನು ನೋಡಿಕೊಳ್ಳಲು ಅವರು ಅಸಮರ್ಥರು ಎಂಬುದನ್ನು ತೋರಿಸಲು ಅರ್ಜಿದಾರ ಪತ್ನಿ ಯಾವುದೇ ಸಾಕ್ಷ್ಯಾಧಾರ ಒದಗಿಸಿಲ್ಲ. ಆದ್ದರಿಂದ ಮಗು ಪತಿ ಪೋಷಕರೊಂದಿಗೆ ಇರುವುದರಲ್ಲಿ ಯಾವುದೇ ದೋಷವಿಲ್ಲ. ಮಗುವಿನ ಪೋಷಣೆ ತಂದೆ ವಹಿಸಿಕೊಳ್ಳುವುದರಲ್ಲಿ ಕಾನೂನು ಉಲ್ಲಂಘನೆಯಾಗುವುದಿಲ್ಲ ಎಂದು ಪೀಠ ಹೇಳಿದೆ. ಆದರೆ, ಪತ್ನಿಗೆ ಮಾಸಿಕ ನಿರ್ವಹಣಾ ವೆಚ್ಚವಾಗಿ ೨೦ ಸಾವಿರ ರೂ.ಗಳ ಪರಿಹಾರ ನೀಡಲು ಆದೇಶಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದೆ.


