ಸುದ್ದಿ

ಎಲ್ಲಾ ಕಾಲಕ್ಕೂ ಸಲ್ಲುವ ಕಾಲಾತೀತ ಕಾದಂಬರಿ ಮಲೆಗಳಲ್ಲಿ ಮದುಮಗಳು- ಡಾ.ಕೆ ವೈ ನಾರಾಯಣ ಸ್ವಾಮಿ

Share It

ಬೆಂಗಳೂರು: ಕನ್ನಡ ಸಾಹಿತ್ಯದ ಮೇರು ಕೃತಿಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿರುವ ಕುವೆಂಪು ಅವರ  ಮಲೆಗಳಲ್ಲಿ ಮದುಮಗಳು ಕಾದಂಬರಿ ಎಲ್ಲ ಕಾಲಕ್ಕೂ ಸಲ್ಲುವ ಕಾಲಾತೀತ ಕಾದಂಬರಿಗಳಲ್ಲಿ ಒಂದು ಎಂದು ಪ್ರಸಿದ್ಧ ನಾಟಕಕಾರ, ಕವಿ ಡಾ.ಕೆ ವೈ ನಾರಾಯಣಸ್ವಾಮಿ ಹೇಳಿದರು.

ಅವರು ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಡಾ. ಮನಮೋಹನ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಂಟಿ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಅಂಗಳದಲ್ಲಿ ತಿಂಗಳ ಪುಸ್ತಕ ಕಾರ್ಯಕ್ರಮದಲ್ಲಿ ಮಲೆಗಳಲ್ಲಿ ಮದುಮಗಳು ಕೃತಿಯ ಪಾತ್ರಾವಲೋಕನ ವಿಷಯ ಕುರಿತು ಮಾತನಾಡುತ್ತಿದ್ದರು.

ಕುವೆಂಪು ಅವರಿಗೆ ಮಲೆಗಳಲ್ಲಿ ಮದುಮಗಳು ಕೃತಿ ಒಂದು ಜೀವನ ದರ್ಶನ ಮಾಡಿಸಿದಂತಹ ಕೃತಿಯಾಗಿದೆ. ಮನುಷ್ಯ ಮತ್ತು ಪ್ರಕೃತಿಯ ಮುಖಾಮುಖಿ ಯಲ್ಲಿ ಬದುಕಿನ ತಲ್ಲಣಗಳು ಹಾಗೂ ಸಮಾಜ ಜೀವನದ ಇತಿಹಾಸವನ್ನು ಕಟ್ಟಿಕೊಡುವ ಈ ಕಾದಂಬರಿ ಇಡೀ ಜಾಗತಿಕ ಸಾಹಿತ್ಯದಲ್ಲಿಯೇ ಯಾವ ಭಾಷೆಯಲ್ಲಿ ಕಾಣಸಿಗದಂತಹ ಅದ್ಭುತ ಅನುಭವ ದ್ರವ್ಯ ಒಳಗೊಂಡಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಈ ಕಾದಂಬರಿಯ ಪ್ರತಿ ಪಾತ್ರಕ್ಕೂ ಕುವೆಂಪು ಅವರು ಪ್ರಾಣೋಕ್ರಣ ಮಾಡಿದ್ದಾರೆ ಪ್ರಕೃತಿಗಿರುವ ನಿತ್ಯ ನೂತನ ಚಿರಂತನ ಶಕ್ತಿಯನ್ನು ಇಲ್ಲಿನ ಕಾದಂಬರಿ ಬೆರಗಾಗಿಸುವ ಹಾಗೆ ಚಿತ್ರಿಸಿದೆ ಹಾಗಾಗಿಯೇ ಕುವೆಂಪು ಜಗದ ಕವಿ ಯುಗದ ಕವಿಯಾಗಿದ್ದಾರೆ ಎಂದು ಅವರು ಹೇಳಿದರು. ಏಳು ದಶಕಗಳಲ್ಲಿ ಲೆಕ್ಕವಿಲ್ಲದಷ್ಟು ಮುದ್ರಣಗಳನ್ನು ಕಂಡಿರುವ ಈ ಕಾದಂಬರಿ ಇಂದಿಗೂ ಸಹ ಮತ್ತೆ ಮತ್ತೆ ಮುದ್ರಣಗೊಂಡು ಓದುಗರನ್ನು ಸೆಳೆಯುತ್ತಿದೆ ಎಂದರೆ ಅದು ಆ ಕೃತಿಯಲ್ಲಿರುವ ಶಕ್ತಿಗೆ ಸಾಕ್ಷಿಯಾಗಿದೆ. ಪ್ರಕೃತಿ ಮನುಷ್ಯ ಮತ್ತು ಪ್ರಾಣಿ ಇವುಗಳ ನಡುವಿನ ಸಂಬಂಧಗಳನ್ನು ಕುವೆಂಪು ಅವರು ಬೆಸೆದು ನಿಲ್ಲಿಸಿರುವ ರೀತಿ ಅನನ್ಯವಾದದ್ದು ಎಂದರು.

ಅಲಕ್ಷಿತರ ಮೂಲಕ ಸಮಾಜವನ್ನು ನೋಡಿದ ಈ ಕೃತಿ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದ್ದರು 40 ವರ್ಷಗಳ ಇತಿಹಾಸವನ್ನು ಅದು ತೆರೆದಿಡುತ್ತದೆ. ಆಧುನಿಕತೆಯ ಪ್ರವೇಶ, ಅನ್ಯ ಧರ್ಮಗಳ ಪ್ರಭಾವ ಆರಂಭವಾಗಿದ್ದ ಕಾಲಘಟ್ಟ ಹಾಗೂ ಜಾಗತಿಕ ಮಟ್ಟದಲ್ಲಾಗುತ್ತಿದ್ದ ಬದಲಾವಣೆಗಳು ಈ ಎಲ್ಲವುಗಳನ್ನು ಮಲೆಗಳಲ್ಲಿ ಮದುಮಗಳು ಕಾದಂಬರಿ ಒಳಗೊಳ್ಳುವ ರೀತಿಯೇ ಆಶ್ಚರ್ಯಕರವಾಗಿದೆ ಎಂದರು.

ಹಾಗಾಗಿ, ಇದು ಒಂದು ಕಾಲಘಟ್ಟದ ಚರಿತ್ರೆ ತೆರೆದಿಡುತ್ತದೆ. ಇಲ್ಲಿನ ಪ್ರತಿಭಾ ಪ್ರಭು ಅತ್ಯಂತ ವಿಶಿಷ್ಟ ಮತ್ತು ಮನೋಜ್ಞವಾದದ್ದು, ಒಂದೊಂದು ಪಾತ್ರದಲ್ಲೂ  ಜೀವ ಚೈತನ್ಯ ತುಂಬಿದೆ. ಅದರಲ್ಲೂ ಗುತ್ತಿ ನಾಯಿಯೇ ಇಡೀ ಕಾದಂಬರಿಯ ನಾಯಕನಾಗಿ ವಿಜೃಂಭಿಸುವ ರೀತಿ ಓದುಗರನ್ನು ವಿಸ್ಮಯಕ್ಕೆ ದೂಡುತ್ತದೆ. ಇದು ಜೀವನ ದರ್ಶನ ಮಾಡಿಸುವ ಕಾದಂಬರಿ ಎಂದು ಬಣ್ಣಿಸಿದ ಅವರು ಕುವೆಂಪು ಅವರ ಆಧ್ಯಾತ್ಮಿಕತೆ, ಜೀವನ ದೃಷ್ಟಿಕೋನ ಹಾಗೂ ಅವರ ಬರಹದ ಚೈತನ್ಯ ಒಂದು ವಿಶಿಷ್ಟ ದರ್ಶನ ಮಾಡಿಸುತ್ತದೆ ಎಂದರು.

ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಕನ್ನಡ ಪುಸ್ತಕ ಪರಾಧಿಕಾರ ಅಧ್ಯಕ್ಷ ಡಾ. ಮಾನಸ,  ಸಮರ್ಥ ಅನುವಾದಕರೊಬ್ಬರು ಕುವೆಂಪು ಅವರಿಗೆ ಸಿಕ್ಕಿದ್ದರೆ ಕನ್ನಡಕ್ಕೆ ಎಂದೊ ನೋಬೆಲ್ ಮತ್ತು ಬೂಕರ್ ಪ್ರಶಸ್ತಿ ಬರುತ್ತಿದ್ದವು. ಕುವೆಂಪು ಬರಹದ ಸಾಮರ್ಥ್ಯಕ್ಕೆ ಎಣೆಯೇ ಇಲ್ಲ, ಇಂದಿನ ಯುವ ಜನತೆ ಪುಸ್ತಕ ಪ್ರೀತಿ ಬೆಳೆಸಿಕೊಂಡು ಇಂತಹ ಮಹಾನ್ ಲೇಖಕರ ಕೃತಿಗಳನ್ನು ಓದುವಂತಾದರೆ ಪುಸ್ತಕ ಪ್ರಾಧಿಕಾರ ಕೈಗೊಂಡಿರುವ ಇಂತಹ ಯೋಜನೆ ಅರ್ಥಪೂರ್ಣವಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕನ್ನಡ  ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಕೆ ಎಂ ಗಾಯಿತ್ರಿ,  ಮಾತನಾಡಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಕುವೆಂಪು ಅವರು ಕೊಟ್ಟ ಕೊಡುಗೆ ಅತ್ಯಂತ ಮಹತ್ವದ್ದು ಅವರು ಚಿತ್ರಿಸಿದ ಪಾತ್ರಗಳು ನಮ್ಮ ಮನಸ್ಸಿನಿಂದ ಮರೆಯಾಗಲು ಸಾಧ್ಯವಿಲ್ಲ ಪ್ರತಿ ಪಾತ್ರವೂ ಜೀವಿಸುತ್ತದೆ. ಇಂತಹ ಸಾಹಿತ್ಯದ ಓದು ಯುವ ಪೀಳಿಗೆಗೆ ಅತ್ಯಂತ ಅಗತ್ಯ ವಿದ್ಯಾರ್ಥಿಗಳು ಸಾಹಿತ್ಯಾಸಕ್ತಿ ಬೆಳೆಸಿಕೊಂಡಲ್ಲಿ ಪುಸ್ತಕ ಪ್ರಾಧಿಕಾರ ಮಾಡುತ್ತಿರುವ  ಪ್ರಯತ್ನಗಳು ಸಹ ಸಾರ್ಥಕವಾಗುತ್ತದೆ ಎಂದರು.

ಡಾ. ಮನಮೋಹನ್ ಸಿಂಗ್ ವಿಶ್ವವಿದ್ಯಾಲಯ ದ ಕುಲಪತಿ ಪ್ರೊ. ರಮೇಶ್ ಬಿ ಅವರು ಮಾತನಾಡಿ ಕುವೆಂಪು ಅವರು ಎಲ್ಲರನ್ನು ಪ್ರಭಾವಿಸುವಂತಹ ಮಹತ್ವದ ಬರಹಗಾರರು. ಅವರನ್ನು ಓದದ ಕನ್ನಡಿಗರೇ ವಿರಳ, ಅವರು ತಲೆಮಾರುಗಳನ್ನು ಪ್ರಭಾವಿಸಿದ ರೀತಿ ಅತ್ಯಂತ ಆಶ್ಚರ್ಯಕರ ಎಂದರು. ವಿಶ್ವವಿದ್ಯಾಲಯ ಪುಸ್ತಕ ಪ್ರಾಧಿಕಾರದ  ಜೊತೆ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲು ಬಯಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಆಂಗ್ಲ ಸಹಪ್ರಾಧ್ಯಾಪಕರು ಹಾಗೂ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರು ಆದ ಡಾ. ತಂಡವ ಗೌಡ ಟಿ ಎನ್ ಅವರು ಉಪಸ್ಥಿತರಿದ್ದರು.
ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ ಬಿ ಕಿರಣ್ ಸಿಂಗ್  ಪ್ರಸ್ತಾವಿಕ ಮಾತನಾಡಿ ಪ್ರಾಧಿಕಾರದ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು.


Share It

You cannot copy content of this page