ಬೆಂಗಳೂರು : ಸಾಯುವವರೆಗೆ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಸಾಂವಿಧಾನಿಕ ನ್ಯಾಯಾಲಯಗಳಾದ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮಾತ್ರ ಹೊಂದಿವೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಮೂರೂವರೆ ವರ್ಷದ ಮಗುವನ್ನು ಕೊಲೆ ಮಾಡಿದ ಪ್ರಕರಣದಲ್ಲಿ ತನಗೆ ಸಾಯುವವರೆಗೆ ಜೀವಾವಧಿ (ಜೈಲು) ಶಿಕ್ಷೆ ವಿಧಿಸಿದ ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ರದ್ದು ಕೋರಿ ರುದ್ರೇಶ್ (28) ಎಂಬಾತ ಹೈಕೋರ್ಟ್ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು.
ಈ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ನೇತೃತ್ವದ ವಿಭಾಗೀಯ ಪೀಠ, ರುದ್ರೇಶ್ಗೆ ಸಾಯುವವರೆಗೂ ಜೈಲು ಶಿಕ್ಷೆ ವಿಧಿಸಿ ಸೆಷನ್ಸ್ (ಅಧೀನ) ಕೋರ್ಟ್ ಆದೇಶಿಸಿದೆ. ಯಾವುದೇ ವಿನಾಯ್ತಿಯಿಲ್ಲದೇ ಮರಣದಂಡನೆಗೆ ಬದಲಾಗಿ ಸಾಯುವವರೆಗೆ ಜೈಲು ಶಿಕ್ಷೆ ವಿಧಿಸುವ ಅಧಿಕಾರ ಸಾಂವಿಧಾನಿಕ ನ್ಯಾಯಾಲಯಗಳಾದ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮಾತ್ರ ಹೊಂದಿವೆ. ಆದರೆ, ಆ ಅಧಿಕಾರ ಸೆಷನ್ಸ್ ಕೋರ್ಟ್ಗೆ ಇಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ನಂತರ ಮಗುವನ್ನು ಕೊಂದಿರುವುದು ಸಾಕ್ಷ್ಯಧಾರಗಳ ಸಮೇತ ಸಾಬೀತಾದ ಕಾರಣಕ್ಕೆ ಕೊಲೆ ಮತ್ತು ಅಪಹರಣದ ಅಪರಾಧದಡಿ ರುದ್ರೇಶನನ್ನು ದೋಷಿಯಾಗಿ ತೀರ್ಮಾನಿಸಿ 2017ರ ನ.27ರಂದು ಸೆಷನ್ಸ್ ಕೋರ್ಟ್ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದ್ದು, ಆರೋಪಿ ರುದ್ರೇಶ್ಗೆ ಸಾಯುವವರೆಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಸೆಷನ್ಸ್ ಕೋರ್ಟ್ ಆದೇಶ ಮಾರ್ಪಡಿಸಿದೆ. ಸಾಯುವವರೆಗೆ ಜೈಲು ಶಿಕ್ಷೆ ಬದಲಾಗಿ ಜೀವಾವಧಿ ಶಿಕ್ಷೆ ವಿಧಿಸಿ ಹೈಕೋರ್ಟ್ ಆದೇಶಿಸಿತು.
ಪ್ರಕರಣದ ಹಿನ್ನೆಲೆ : ಶಿವಮೊಗ್ಗದ ಹೊಸಮನೆ ಗ್ರಾಮ ನಿವಾಸಿ ರುದ್ರೇಶ್, ಹೊಸನಗರದ ಮಠವೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೊಲೆಗೀಡಾದ ಮಗುವಿನ ತಾಯಿ (ಪ್ರಕರಣದ ದೂರುದಾರೆ) ಆ ಮಠದ ಭಕ್ತೆಯಾಗಿದ್ದರು. ನಿಯಮಿತವಾಗಿ ಮಠಕ್ಕೆ ಭೇಟಿ ನೀಡುತ್ತಿದ್ದರು. ಮಠದ ವ್ಯವಹಾರಗಳಲ್ಲಿ ರುದ್ರೇಶ್ಗೆ ದೂರುದಾರೆ ಮತ್ತು ಆಕೆ ತಾಯಿ ಸಲಹೆ ನೀಡುತ್ತಿದ್ದರು. ಇದೇ ವಿಚಾರವಾಗಿ ದೂರುದಾರೆ ಬಗ್ಗೆ ರುದ್ರೇಶ್ ದ್ವೇಷ ಬೆಳೆಸಿಕೊಂಡಿದ್ದ.
2017ರ ಏ.10ರಂದು ಮಠದ ಕಾರ್ಯಕ್ರಮವೊಂದರಲ್ಲಿ ದೂರುದಾರೆ ತನ್ನ ಮೂರೂವರೆ ವರ್ಷದ ಗಂಡ ಮಗು ಮತ್ತು ಕುಟುಂಬದ ಸದಸ್ಯರೊಂದಿಗೆ ಭಾಗಿಯಾಗಿದ್ದರು. ಅಂದು ರಾತ್ರಿ ಮಠದಲ್ಲೇ ಊಟ ಸೇವಿಸಿ ಮಲಗಿದ್ದರು. ಬೆಳಗ್ಗೆ 5.30ಕ್ಕೆ ಎಚ್ಚರಗೊಂಡಾಗ ಮಗು ಪಕ್ಕದಲ್ಲಿ ಇರಲಿಲ್ಲ. ನಂತರ ಮಗು ಶವವಾಗಿ ಪತ್ತೆಯಾಗಿತ್ತು. ಈ ಕುರಿತು ಹೊಸನಗರ ಠಾಣಾ ಪೊಲೀಸರು ತನಿಖೆ ನಡೆಸಿದಾಗ, ಮಗುವನ್ನು ರುದ್ರೇಶ್ ಅಪಹರಿಸಿ ಕೊಲೆ ಮಾಡಿದ್ದ ಕೃತ್ಯ ಬಯಲಾಗಿತ್ತು.
ಕೊಲೆ ಮತ್ತು ಅಪಹರಣ ಪ್ರಕರಣದಲ್ಲಿ ರುದ್ರೇಶನನ್ನು ದೋಷಿಯಾಗಿ 2017ರಂದು ನ.27ರಂದು ತೀರ್ಮಾನಿಸಿದ್ದ ಸೆಷನ್ಸ್ ಕೋರ್ಟ್ ನ್ಯಾಯಾಲಯ, ಸಾಯುವವರೆಗೂ ಜೀವಾವಧಿ ಶಿಕ್ಷೆ ವಿಧಿಸಿ ನ.30ರಂದು ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಅಪರಾಧಿಯು ಹೈಕೋರ್ಟ್ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದ.

