ಚಾಮರಾಜನಗರ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತಪಟ್ಟ ಮೂವರ ಕುಟುಂಬಕ್ಕೆ ಸರಕಾರದ ವತಿಯಿಂದ ತಲಾ 15 ಲಕ್ಷ ರುಪಾಯಿ ಪರಿಹಾರ ಧನವನ್ನು ವಿತರಣೆ ಮಾಡಲಾಗಿದೆ.
ಹನೂರು ತಹಸೀಲ್ದಾರ್ ಚೈತ್ರ ಅವರ ಮೂಲಕ ಕುಟುಂಬದ ಸದಸ್ಯರಿಗೆ 15 ಲಕ್ಷ ರು. ಪರಿಹಾರದ ಚೆಕ್ ವಿತರಣೆ ಮಾಡಲಾಯಿತು. ಸ್ಥಳೀಯ ಶಾಸಕ ಮಂಜುನಾಥ್ ತಲಾ 10 ಲಕ್ಷ ರುಪಾಯಿ ಪರಿಹಾರ ಧನ ನೀಡಿದರು.
ಅರಣ್ಯ ಸಿಬ್ಬಂದಿಯ ಗುಂಡೇಡಿಗೆ ಬಲಿಯಾಗಿ ಮೂವರು ಮೃತಪಟ್ಟ ಪ್ರಕರಣ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಬೇಟೆಗಾರರು ಎಂದು ಹೇಳಿ, ಅವರ ಮೇಲೆ ಶೂಟ್ ಮಾಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.
ಕೊಳ್ಳೆಗಾಲ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆಯೂ ಆರಂಭಗೊಂಡಿದ್ದು, ಪ್ರಕರಣದ ಕುರಿತು ಸಮಗ್ರವಾಗಿ ತನಿಖೆ ನಡೆಸಿ, ನಂತರ ಕ್ರಮ ಕೈಗೊಳ್ಳಲು ಸರಕಾರ ತೀರ್ಮಾನಿಸಿದೆ. ಈ ನಡುವೆ ಮೃತಪಟ್ಟ ಕುಟುಂಬಸ್ಥರು ಮತ್ತು ಗ್ರಾಮಸ್ಥರ ಒತ್ತಡಕ್ಕೆ ಮಣಿದ ಸರಕಾರ ಪರಿಹಾರ ಘೋಷಣೆ ಮಾಡಿದೆ.

