ತಿರುವನಂತಪುರ: ಕೇರಳದ ತಿರುವನಂತಪುರದಲ್ಲಿ ನಡೆದ ಅಂತಿಮ ಟಿ-20 ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯಗೊಳಿಸುವ ಮೂಲಕ ಸರಣಿಯನ್ನು 4-1 ರಿಂದ ವಶಪಡಿಸಿಕೊಂಡಿದೆ.
ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಇಶಾನ್ ಕಿಶನ್ ಅವರ ಭರ್ಜರಿ ಶತಕದ ನೆರವಿನಿಂದ ಐದು ವಿಕೆಟ್ ಕಳೆದುಕೊಂಡು271 ರನ್ಗಳ ಬೃಹತ್ ಮೊತ್ತವನ್ನು ಪೇರಿಸಿತ್ತು. ಇದನ್ನು ಬೆನ್ನಟ್ಟಿದ್ದ ನ್ಯೂಜಿಲೆಂಡ್ ತಂಡ 223 ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಳ್ಳುವ ಮೂಲಕ ಸೋಲೊಪ್ಪಿಕೊಂಡಿತು.
ಭಾರತದ ಪರ ಇಶಾನ್ ಕಿಶನ್ 43 ಎಸೆತಗಳಲ್ಲಿ ಶತಕ ಸಿಡಿಸಿ 103 ರನ್ಗಳಿಸಿದರೆ, ನಾಯಕ ಸೂರ್ಯಕುಮಾರ್ ಯಾದವ್ 30 ಎಸೆತಗಳಲ್ಲಿ 62 ರನ್ಗಳಿಸಿದರು. ಉಳಿದಂತೆ ಹಾರ್ದಿಕ್ ಪಾಂಡ್ಯ 17 ಎಸೆತಗಳಲ್ಲಿ 42 ರನ್ಗಳಿಸಿ ಬೃಹತ್ ಮೊತ್ತಕ್ಕೆ ಕಾರಣವಾದರು.
ನ್ಯೂಜಿಲೆಂಡ್ ತಂಡ 19.4 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡ 225 ರನ್ಗಳಿಗೆ ಶರಣಾಗುವ ಮೂಲಕ 46 ರನ್ಗಳ ಸೋಲುಕಂಡಿತು. ಫಿನ್ ಅಲೇನ್ 80 ರನ್ಗಳಿಸಿದರೆ, ಇಶ್ ಸೋದಿ 33 ರನ್ಗಳಿಸಿದರು, ಡರೆನ್ ಮಿಚೆಲ್ 26 ರನ್ಗಳನ್ನು ಗಳಿಸಿ ಹೋರಾಟ ನೀಡಿದರು.
ಭಾರತದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಹರ್ಷದೀಪ್ ಸಿಂಗ್ ಐದು ವಿಕೆಟ್ ಪಡೆದುಕೊಂಡರೆ, ಅಕ್ಷರ್ ಪಟೇಲ್ ಪ್ರಮುಖ ಮೂರು ವಿಕೆಟ್ಗಳನ್ನು ಪಡೆದು ಗೆಲುವಿನಲ್ಲಿ ಪಾತ್ರವಹಿಸಿದರು. ಇಶಾನ್ ಕಿಶನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಸೂರ್ಯಕುಮಾರ್ ಯಾದವ್ ಸರಣಿಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡರು.

