ಬೆಂಗಳೂರು: ಇತ್ತೀಚೆಗಷ್ಟೇ BMTC ಖಾಸಗೀಕರಣಕ್ಕೆ ಸಂಬಂಧಿಸಿ ಜಿದ್ದಾಜಿದ್ದಿಗೆ ಬಿದ್ದಿದ್ದ ಮೋಹನ್ ದಾಸ್ ಪೈ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರ ಕಾರ್ಯವನ್ನು ಮನದುಂಬಿ ಹೊಗಳಿದ್ದಾರೆ.
ಮಹಿಳೆಯರು ಮತ್ತು ಮಂಗಳಮುಖಿಯರಿಗೆ ಉಚಿತ ಆಟೋ ಡ್ರೈವಿಂಗ್ ಟ್ರೈನಿಂಗ್ ನೀಡುವ ಮೂಲಕ ನಗರದ ಜೀವನಾಡಿ ಎನಿಸಿಕೊಂಡಿರುವ ಆಟೋ ವ್ಯವಸ್ಥೆಗೆ ಹೊಸ ರೂಪ ಕೊಡಲು ರಾಮಲಿಂಗಾ ರೆಡ್ಡಿ ತೀರ್ಮಾನಿಸಿದ್ದಾರೆ. ಈ ಕುರಿತು ಮಹಿಳೆಯರು ಮತ್ತು ಮಂಗಳಮುಖಿಯರಿಗೆ ಉಚಿತ ತರಬೇತಿ ನೀಡುವ ಯೋಜನೆಯೊಂದನ್ನು ಬಜೆಟ್ ನಂತರ ಆರಂಭಿಸುವ ಘೋಷಣೆ ಮಾಡಿದ್ದಾರೆ.
ರಾಮಲಿಂಗಾ ರೆಡ್ಡಿ ಅವರ ತೀರ್ಮಾನಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಮೋಹನ್ ದಾಸ್ ಪೈ, ರಾಮಲಿಂಗಾ ರೆಡ್ಡಿ ಅವರ ತೀರ್ಮಾನ ಅತ್ಯಂತ ಶ್ಲಾಘನೀಯ. ಇದೇ ರೀತಿ 50 ಸಾವಿರ ಮಹಿಳೆಯರು ಆಟೋ ಓಡಿಸುವ ಮೂಲಕ ಸ್ವಾವಲಂಬಿ ಯಾಗಿ ಬದುಕುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿ ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, ಕೌಶಲ್ಯ ವೃದ್ಧಿ ಮತ್ತು ಅವಕಾಶ ಸೃಷ್ಟಿ ನಮ್ಮ ಉದ್ದೇಶವಾಗಿದೆ. ಆ ಮೂಲಕ ಘನತೆಯ ಬದುಕು ಸೃಷ್ಟಿಸಿಕೊಳ್ಳಲು ನೆರವಾಗಲು ತೀರ್ಮಾನಿಸಿದ್ದೇವೆ. ಮಹಿಳೆಯರು ಮತ್ತು ಮಂಗಳಮುಖಿಯರ ಸ್ವಾವಲಂಬಿ ಬದುಕಿಗೆ ನರವಾಗಲಿದ್ದೇವೆ ಎಂದು ತಿಳಿಸಿದ್ದಾರೆ.
ಸಚಿವ ರಾಮಲಿಂಗಾ ರೆಡ್ಡಿ ಅವರು, ಇತ್ತೀಚೆಗೆಬಿ ಫ್ಯಾಕ್ ಸಹಯೋಗದಲ್ಲಿ 500 ಮಹಿಳೆಯರಿಗೆ ಉಚಿತ ಡ್ರೈವಿಂಗ್ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದ್ದರು. ಒಂಬತ್ತು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಹಿಳೆಯರು ಮತ್ತು ಮಂಗಳಮುಖಿಯರು ಸೌಲಭ್ಯ ಪಡೆಯುತ್ತಿದ್ದು, ಉಳಿದ ಕ್ಷೇತ್ರಗಳಿಗೆ ವಿಸ್ತರಿಸುವ ಕುರಿತು ಮಾಹಿತಿ ಹಂಚಿಕೊಂಡಿದ್ದರು.

