ಯುವಕನೋರ್ವನನ್ನು ಕಿಡ್ನಾಪ್ ಮಾಡಿ ಬಲವಂತವಾಗಿ ಮಂಗಳಮುಖಿ ವೇಷ ಹಾಕಿಸಿ ಕಲೆಕ್ಷನ್ ಹಾಗೂ ಸೆಕ್ಸ್ ವರ್ಕ್, ರೀಲ್ಸ್ ಗಳಲ್ಲಿ ಬಳಸಿರುವ ಆರೋಪ ಕೇಳಬಂದಿದೆ. ಈ ದಂಧೆಯಲ್ಲಿ ತನ್ನಿಂದ ಲಕ್ಷಾಂತರ ರೂಪಾಯಿ ಹಣ ಗಳಿಸಿ ಬಲವಂತವಾಗಿ ಲಿಂಗ ಬದಲಾವಣೆಗೆ ಹುನ್ನಾರ ನಡೆಸಿದ್ದರು. ಆದ್ರೆ ನಾನು ಇದರಿಂದ ಬೇಸತ್ತು ಆರೋಪಿಗಳ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಬಂದಿದ್ದೇನೆ ಎಂದು ಸಂತ್ರಸ್ತ ಹೇಳಿಕೊಂಡಿದ್ದಾನೆ.ಮಂಗಳಮುಖಿಯ ಕಿರುಕುಳಕ್ಕೆ ಬೇಸತ್ತ ಯುವಕ ನ್ಯಾಯಕ್ಕಾಗಿ ಮೈಸೂರು ಪೊಲೀಸರ ಮೊರೆ ಹೋಗಿದ್ದಾನೆ. ಮತ್ತೆ ಆ ಕರಾಳ ದಂಧೆಯಲ್ಲಿ ತನ್ನನ್ನು ನೂಕಲು ಹುನ್ನಾರ ನಡೆಸುತ್ತಿರುವ ಮಂಗಳಮುಖಿ ವಿರುದ್ಧ ಯುವಕ ಮೈಸೂರಿನ ಲಷ್ಕರ್ ಠಾಣೆಗೆ ದೂರು ನೀಡಿದ್ದಾನೆ. ನಂಜನಗೂಡಿನ ಯುವಕ ಅನಿಲ್ ಕುಮಾರ್ @ಅಕ್ಷತಾ ದೂರು ನೀಡಿರುವ ಯುವಕ. ಮಂಗಳೂರು ಮೂಲದ ಅನಿತಾ ಎಂಬ ಮಂಗಳಮುಖಿ ಮತ್ತು ಇತರರ ವಿರುದ್ಧ ಯುವಕ ಆರೋಪ ಮಾಡಿದ್ದಾನೆ.
ನಾಲ್ಕು ತಿಂಗಳ ಹಿಂದೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಬಸ್ ಗಾಗಿ ಕಾಯುತ್ತಿದ್ದಾಗ ಮಂಗಳಮುಖಿ ಅನಿತಾ ಮತ್ತು ಅವರ ತಂಡ ತನಗೆ ಮುಸುಕು ಹಾಕಿ ಮತ್ತು ಬರುವಂತೆ ಮಾಡಿ ಬಲವಂತವಾಗಿ ಕಿಡ್ನಾಪ್ ಮಾಡಿ ಮಂಗಳೂರಿಗೆ ಕರೆದೊಯ್ದಿದ್ದರು. ಸೀರೆ, ನೈಟಿ, ಕಿವಿಗೆ ಓಲೆ, ಮೂಗಿಗೆ ಮೂಗುತಿ ಹಾಕಿಸಿ ತನಗೂ ಕೂಡ ಮಂಗಳಮುಖಿಯ ವೇಷ ಹಾಕಿ ಬಲವಂತವಾಗಿ ಬೀದಿಗಳಲ್ಲಿ ಅಂಗಡಿಗಳ ಮುಂದೆ ಕಲೆಕ್ಷನ್ ಮಾಡಿಸಿದ್ದಾರೆ.

