ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆಯನ್ನು ತಳ್ಳಿಹಾಕಿರುವ ಸಚಿವ ಎಂ.ಬಿ. ಪಾಟೀಲ ಅವರು, ಇದೊಂದು ಕೇವಲ ಊಹಾಪೋಹ ಎಂದು ಸ್ಪಷ್ಟಪಡಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮುಖ್ಯಮಂತ್ರಿಗಳ ರಾಜೀನಾಮೆ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ವೇಣುಗೋಪಾಲ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ರಾಜ್ಯಸಭೆ ಮತ್ತು ಎಂಎಲ್ಸಿ ಚುನಾವಣೆಯ ಬಗ್ಗೆ ಮಾತ್ರ ಚರ್ಚಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಬೇರೆ ಯಾವುದೇ ವಿಚಾರಕ್ಕೆ ಅಲ್ಲಿ ಸ್ಥಾನವಿರಲಿಲ್ಲ” ಎಂದು ಹೇಳಿದರು.
ಇದಲ್ಲದೆ, ತಾವು ಮತ್ತು ಇತರರು ಸಿದ್ದರಾಮಯ್ಯ ಅವರೊಂದಿಗೆಯೇ ಇದ್ದು, ದೆಹಲಿ ಪ್ರವಾಸದಲ್ಲೂ ಜೊತೆಯಾಗಿದ್ದಾಗಿ ವಿವರಿಸಿದ ಅವರು, “ಕೆ.ಜೆ. ಜಾರ್ಜ್ ಅವರ ಮನೆಯಲ್ಲಿ ಬೆಳಿಗ್ಗೆ, ರಾತ್ರಿ ಸಮಯ ಕಳೆದಿದ್ದೇವೆ. ಊಟವೂ ಆಗಿದೆ. ನಾವೆಲ್ಲರೂ ಸಿದ್ದರಾಮಯ್ಯ ಅವರ ಜೊತೆಗಿದ್ದೇವೆ. ಹೀಗಿರುವಾಗ ರಾಜೀನಾಮೆಯಂತಹ ವದಂತಿಗಳಿಗೆ ಅವಕಾಶವೇ ಇಲ್ಲ” ಎಂದು ತಿರಸ್ಕರಿಸಿದರು.
ಒಂದು ಪ್ರಶ್ನೆಗೆ ಉತ್ತರಿಸಿದ ಅವರು, “ಸಿದ್ದರಾಮಯ್ಯ ಅವರನ್ನು ಮುಂದುವರೆಸಬೇಕು ಎಂದು ನಾವೇಕೆ ಒತ್ತಾಯಿಸಬೇಕು? ಅವರ ಜೊತೆಯಲ್ಲೇ ನಾವಿದ್ದೇವೆ. ಬದಲಾವಣೆಯ ಆವಶ್ಯಕತೆ ಇದ್ದಾಗ ಮಾತ್ರ ಒತ್ತಾಯ ಮಾಡಬಹುದು. ಪ್ರಸ್ತುತ ಅಂತಹ ಪ್ರಶ್ನೆಯೇ ಇಲ್ಲ” ಎಂದು ನುಡಿದರು.
ಬೆಳಗಿನ ಉಪಾಹಾರದ ನಂತರ ರಾಜೀನಾಮೆ ನೀಡುವುದಾಗಿ ಹರಡಿದ ಸುದ್ದಿಯೂ ಸಂಪೂರ್ಣ ಸುಳ್ಳು ಎಂದು ಅವರು ತಿಳಿಸಿದರು.

