ಶಿವಮೊಗ್ಗ: ವಲಸೆ ಕಾರ್ಮಿಕರು ಚಲಿಸುತ್ತಿದ್ದ ಬೊಲೋರೋ ವಾಹನ ಪಲ್ಟಿಯಾಗಿ 17 ಜನರು ಗಾಯಗೊಂಡಿರುವ ಘಟನೆ ಜಿಲ್ಲೆಯ ಮಂಡಗದ್ದೆ ಬಳಿ ನಡೆದಿದೆ.
ಕಳಸ ಭಾಗದ ಕಾಫಿ ತೋಟಕ್ಕೆ ಹೋಗುವಾಗ ವಾಹನ ಚಾಲಕನ ನಿಯಂತ್ರಣ ತಪ್ಪಿ ಮಂಡಗದ್ದೆ ತಿರುವಿನಲ್ಲಿ ಪಲ್ಟಿಯಾಗಿದೆ. ಬೊಲೋರೋ ವಾಹನದಲ್ಲಿ ಮಕ್ಕಳು ಸೇರಿ ಒಟ್ಟು 29 ಜನರಿದ್ದರು. 17 ಜನರಿಗೆ ಗಾಯಗಳಾಗಿದ್ದು, ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮಧ್ಯಪ್ರದೇಶದಿಂದ ಎರಡು ದಿನದ ಹಿಂದೆ ಬಿಟ್ಟಿದ್ದ ವಲಸೆ ಕಾರ್ಮಿಕರ ವಾಹನ ನಿನ್ನೆ ರಾತ್ರಿಯಷ್ಟೇ ಶಿವಮೊಗ್ಗ ಜಿಲ್ಲೆ ಪ್ರವೇಶಿಸಿತ್ತು. ಇಲ್ಲಿನ ಕೆಲ ರಸ್ತೆ ಅಂಕುಡೊಂಕು ಇರುವುದರಿಂದ ಹೊಸ ಚಾಲಕರಿಗೆ ರಸ್ತೆ ಅಷ್ಟು ಬೇಗ ಅಂದಾಜಿಗೆ ಸಿಗುವುದಿಲ್ಲ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ ಎಂದು ಗಾಯಾಳುಗಳು ಹೇಳಿಕೊಂಡಿದ್ದಾರೆ.
ಮುಡುಬ ಕಡೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಶಿವಮೊಗ್ಗದ ನಿವಾಸಿ ಮಹಮ್ಮದ್ ಉಮರ್ ಎಂಬುವರು ವಾಹನ ಪಲ್ಟಿಯಾಗಿದ್ದನ್ನು ನೋಡಿ ತಮ್ಮ ಕಾರಿನಲ್ಲಿ 5 ಜನರನ್ನು ಕರೆದುಕೊಂಡು ಬಂದಿದ್ದಾರೆ. ಉಳಿದವನ್ನು ಆಂಬ್ಯುಲೆನ್ಸ್ನಲ್ಲಿ ಕರೆದುಕೊಂಡು ಬರಲಾಗಿದೆ.
ಕೆಲವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿದರೆ, ಇನ್ನು ಕೆಲವು ಗಾಯಗಳನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.

