ಬೆಂಗಳೂರು: ನೀಟ್ ಪರೀಕ್ಷೆ ಸರಿಯಾಗಿ ನಡೆಯುತ್ತಿಲ್ಲ ಎಂದು ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ನೀಟ್ ಪರೀಕ್ಷೆಯನ್ನೇ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ನೀಟ್ ಫಲಿತಾಂಶಕ್ಕೆ, ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ ಮಾಡಿ, ಮೋದಿಯವರು ಸರಕಾರ ರಚನೆ ಮಾಡುವ ಕಸರತ್ತು ಮುಗಿದಿದ್ದರೆ ಈ ಕಡೆ ಗಮನ ಹರಿಸಲಿ ಎಂದು ಕುಟುಕಿದ್ದರು. ಅದೇ ರೀತಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಕೂಡ ಟ್ವೀಟ್ ಮೂಲಕ ಪ್ರಧಾನಿ ಅವರನ್ನು ಕುಟುಕಿದ್ದಾರೆ.
ಈ ನಡುವೆ ತಮಿಳುನಾಡಿನಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು, ನೀಟ್ ಪರೀಕ್ಷೆಯನ್ನೇ ಬ್ಯಾನ್ ಮಾಡಿ, ರಾಜ್ಯಮಟ್ಟದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸಲು ಅನುಮತಿ ನೀಡಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಸ್ವತಃ ಸಿಎಂ ಎಂ.ಕೆ.ಸ್ಟಾಲಿನ್, ನೀಟ್ ಪರೀಕ್ಷೆ ಬ್ಯಾನ್ ಮಾಡುವಂತೆ ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.
ತಮಿಳುನಾಡಿನಲ್ಲಿ ನೀಟ್ನಲ್ಲಾಗಿರುವ ಅವ್ಯವಹಾರಕ್ಕೆ ಪಕ್ಷಾತೀತ ವಿರೋಧ ವ್ಯಕ್ತವಾಗಿದೆ. ಇನ್ನುಳಿದ ವಿವಿಧ ರಾಜ್ಯಗಳಲ್ಲಿ, ಅದರಲ್ಲಿಯೂ ದಕ್ಷಿಣದ ರಾಜ್ಯಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಉತ್ತರ ಭಾರತೀಯರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನೀಟ್ ಪರೀಕ್ಷೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ ನೀಟ್ ಮೇಲೆ ಅನುಮಾನವೇಕೆ?: ನೀಟ್ ಪರೀಕ್ಷೆಯ ಬಗ್ಗೆ ಮೊದಲಿಂದಲೂ ಅಪಸ್ವರ ಇದ್ದೇ ಇದೆ. ಆದರೆ, ಈ ಬಾರಿಯ ನೀಟ್ ಪರೀಕ್ಷೆ ನಡೆದಿರುವ ರೀತಿ ಮತ್ತು ಬಂದಿರುವ ಫಲಿತಾಂಶ ಇಂತಹದ್ದೊಂದು ಅನುಮಾನ ಹೆಚ್ಚಾಗಲು ಕಾರಣವಾಗಿದೆ. ಆ ಕಾರಣಗಳಲ್ಲಿ ಪ್ರಮುಖ ಕಾರಣಗಳು ಕೆಳಗಿನಂತಿವೆ.
- ಜೂನ್ 14 ಕ್ಕೆ ಪ್ರಕಟವಾಗಬೇಕಿದ್ದ ಫಲಿತಾಂಶ, ಏಕಾಏಕಿ ಜೂನ್ 4 ರಂದು ಪ್ರಕಟ
- ಇದೇ ಮೊದಲ ಬಾರಿಗೆ 67 ವಿದ್ಯಾರ್ಥಿಗಳಿಗೆ 720 ಕ್ಕೆ 720 ಅಂಕ
- ಹರಿಯಾಣದ ಒಂದೇ ಪರೀಕ್ಷಾ ಕೇಂದ್ರದ ಎಂಟು ವಿದ್ಯಾರ್ಥಿಗಳಿಗೆ 720 ಅಂಕ
- ಇಷ್ಟೆಲ್ಲ ಆರೋಪ ಕೇಳಿಬಂದರೂ, ಕೇಂದ್ರ ಸರಕಾರ ಈ ಬಗ್ಗೆ ಗಮನಹರಿಸಿಲ್ಲ
24 ಲಕ್ಷ ವಿದ್ಯಾರ್ಥಿಗಳಿಗೆ ಅನ್ಯಾಯ: ಹರಿಯಾಣದ ಒಂದೇ ಪರೀಕ್ಷಾ ಕೇಂದ್ರದ 8 ವಿದ್ಯಾರ್ಥಿಗಳು 720 ಅಂಕಗಳನ್ನು ಪಡೆದುಕೊಂಡಿದ್ದಾರೆ. ಆ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು ಎಂಬ ಆರೋಪಿವಿದೆ. ಈ ನಡುವೆ ಪ್ರತಿ ವರ್ಷ ಒಬ್ಬ ಅಥವಾ ಇಬ್ಬರು ಔಟ್ ಆಫ್ ಔಟ್ ತೆಗೆದುಕೊಳ್ಳುತ್ತಿದ್ದ ಪರೀಕ್ಷೆಯಲ್ಲಿ ಇದೇ ಪ್ರಥಮ ಬಾರಿಗೆ 67 ಮಂದಿ ಔಟ್ ಆಫ್ ಔಟ್ ಅಂಕ ಪಡೆದಿದ್ದಾರೆ. ಇದು ಮೇಲ್ನೋಟಕ್ಕೆ ಅಕ್ರಮ ನಡೆದಿದೆ ಎಂಬುದನ್ನು ಸಾರಿ ಹೇಳುತ್ತಿದೆ. ಇದರಿಂದ 24 ಲಕ್ಷ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂಬುದು ವಿಪಕ್ಷಗಳ ಆರೋಪವಾಗಿದೆ.

