ಹೊಳೇನರಸೀಪುರ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್ಐಟಿ ಪೊಲೀಸರು, ಹೊಳೇನರಸೀಪುರದ ಎಚ್.ಡಿ.ರೇವಣ್ಣ ನಿವಾಸದಲ್ಲಿ ಇಂದು ಮಹಜರು ಪ್ರಕ್ರಿಯೆ ನಡೆಸಿದರು.
ಬೆಂಗಳೂರಿನಿಂದ ಕ್ಯೂಆರ್ಟಿ ವಾಹನದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಕರೆದುಕೊಂಡು ಹೊಳೆನರಸೀಪುರಕ್ಕೆ ಬಂದಿದ್ದ ಎಸ್ಐಟಿ ಅಧಿಕಾರಿಗಳು, ಪ್ರಜ್ವಲ್ ನಿವಾಸದಲ್ಲಿ ಮಹಜರು ನಡೆಸಿದರು. ಸತತ ನಾಲ್ಕು ಗಂಟೆಗಳ ಕಾಲ ಮಹಜರು ಕಾರ್ಯ ನಡೆಯಿತು.
ಶನಿವಾರ ಮಧ್ಯಾಹ್ನ ಒಂದು ಗಂಟೆಯ ಸಮಯದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಹಾಸನಕ್ಕೆ ಕರೆತರಲಾಗಿತ್ತು. ಪ್ರಜ್ವಲ್ ನಿವಾಸದಲ್ಲಿ ಎಫ್ಎಸ್ಎಲ್ ತಜ್ಞರ ಸಮ್ಮುಖದಲ್ಲಿ ಸತತ ನಾಲ್ಕು ಗಂಟೆ ಸ್ಥಳ ಮಹಜರು ಪ್ರಕ್ರಿಯೆ ನಡೆಸಲಾಯಿತು. ಮಹಜರು ಪೂರ್ಣವಾದ ಬಳಿಕ ಪ್ರಜ್ವಲ್ ಅವರನ್ನು ಎಸ್ಐಟಿ ಅಧಿಕಾರಿಗಳು ಕರೆದೊಯ್ದರು.
ನಾಲ್ಕು ವಾಹನಗಳಲ್ಲಿ ಆಗಮಿಸಿದ್ದ ಎಸ್ಐಟಿ ತಂಡ ಮಹಜರು ಪೂರ್ಣಗೊಳಿಸಿದೆ. ಇನ್ನು ಮಹಜರು ಮುಗಿಸಿ ತೆರಳುತ್ತಿದ್ದ ವೇಳೆ ಬೆಂಬಲಿಗರು ಪ್ರಜ್ವಲ್ ಪರ ಘೋಷಣೆ ಕೂಗಿದರು. ಪ್ರಜ್ವಲ್ ರೇವಣ್ಣ ಬೆಂಬಲಿಗರು ಮತ್ತು ಮಾಧ್ಯಮಗಳ ಕಣ್ತಪ್ಪಿಸಲು ವಾಹನದ ಸೀಟಿನಲ್ಲಿಯೇ ಮಲಗಿದ್ದರು.
ಆದರೂ, ಪ್ರಜ್ವಲ್ ಅವರನ್ನು ಗುರುತಿಸಿದ ಬೆಂಬಲಿಗರು ಜೈಕಾರ ಹಾಕಿದರು. ಹೊಳೇನರಸೀಪುರದ ಚೆನ್ನಾಂಬಿಕಾ ಚಿತ್ರಮಂದಿರದ ಪಕ್ಕದಲ್ಲಿರುವ ಎಚ್.ಡಿ.ರೇವಣ್ಣ ನಿವಾಸದಲ್ಲಿ ಮಹಜರು ಪ್ರಕ್ರಿಯೆ ನಡೆಸಿದ ಎಸ್ಐಟಿ ಹಲವಾರು ಮಾಹಿತಿಗಳನ್ನು ಸಂಗ್ರಹಿಸಿದರು.

