ಶಿವಮೊಗ್ಗ : “ಹಮಾರೆ ಬಾರಹ” ಸಿನಿಮಾದ ಟೈಟಲ್ ಬದಲಾವಣೆ ಆಗಬೇಕಿತ್ತು. ಕೆಲವರು ಟ್ರೈಲರ್ ನೋಡಿ ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ಹಮಾರೆ ಬಾರಹ ಸಿನಿಮಾ ಬ್ಯಾನ್ ಮಾಡುವ ಮೂಲಕ ವಾಕ್ ಸ್ವ್ವಾತಂತ್ರ್ಯ ಉಲ್ಲಂಘನೆಯಾಗಿದೆ ಎಂದು ನಟ ಅಹಿಂಸಾ ಚೇತನ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಿನಿಮಾಕ್ಕೆ ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ. ಸಿನಿಮಾದ ದೃಶ್ಯಗಳನ್ನು ಸೆನ್ಸಾರ್ ಮಂಡಳಿ 11 ಬಾರಿ ಕಟ್ ಮಾಡಿದೆ. ಟ್ರೈಲರ್ ನೋಡಿ ಸಿನಿಮಾ ನಿಷೇಧಿಸಬೇಕೆಂದರೆ ಇತ್ತೀಚೆಗೆ ಬರುವ ಎಲ್ಲಾ ಸಿನಿಮಾಗಳನ್ನು ನಿಷೇಧಿಸಬೇಕಾಗುತ್ತದೆ. ಸಿನಿಮಾಗಳಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ ಮುಂತಾದ ದೃಶ್ಯಗಳು ಇದ್ದೇ ಇರುತ್ತವೆ. ಊಹೆ ಮಾಡಿ ಸಿನಿಮಾ ನಿಷೇಧಿಸುವುದು ತರವಲ್ಲ. ಈ ಸಿನಿಮಾಕ್ಕೆ ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ. ಹಾಗಿದ್ದರೂ ಕರ್ನಾಟಕ ಸರಕಾರ ನಿಷೇಧಿಸಿರುವುದು ಸರಿಯಲ್ಲ ಎಂದರು.
ಹಮಾರೆ ಬಾರಹ ಸಿನಿಮಾ ನೋಡದೆ ರಾಜ್ಯ ಸರ್ಕಾರ ಟ್ರೈಲರ್ ನೋಡಿ ಬ್ಯಾನ್ ಮಾಡಿರುವುದು ಎಷ್ಟು ಸರಿ. ಬ್ಯಾನ್ ಮಾಡಿದ ಸರ್ಕಾರವೂ ಸಹ ಕೋಟಿಗಟ್ಟಲೆ ಹಣ ಹಾಕಿ ಸಿನಿಮಾ ಮಾಡಿ ಬ್ಯಾನ್ ಮಾಡಿದರೆ ಹೇಗಿರುತ್ತದೆ. ಹಾಗಾಗಿ ವಾಕ್ ಸ್ವತಂತ್ರ್ಯ ಹತ್ತಿಕ್ಕಬಾರದು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಕಾಶ್ಮೀರ ಫೈಲ್ ಸಿನಿಮಾ ಬ್ಯಾನ್ ಮಾಡಿದ್ದರು. ಇದು ಸರಿಯಲ್ಲ. ನನಗೆ ಹಲವು ಮುಸ್ಲೀಂ ಸಿನಿಮಾಗಳಲ್ಲಿ ಪಾತ್ರ ವಹಿಸಲು ಬಂದಿತ್ತು. ನಾನು ನಟಿಸಿರಲಿಲ್ಲ. ಹಾಗಂತ ಅದನ್ನು ತಿರಸ್ಕರಿಸಲಾಗದು ಎಂದರು.
ಕರ್ನಾಟಕದಲ್ಲಿ ಮಾಡಲಾದ ಜಾತಿ ಜನಗಣತಿ ಬಿಡುಗಡೆ ಮಾಡದೆ ಇರುವುದು ಅನ್ಯಾಯ. ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯ ಇದನ್ನು ವಿರೋಧಿಸಿದಾಗ ಅಹಿಂದ ಪರ ನಿಂತಿಲ್ಲ. ಹಾಗಾಗಿ ಅಹಿಂದ ಪರ ನಿಲ್ಲಲು ಸಿದ್ದರಾಮಯ್ಯರಿಗೆ ನೈತಿಕ ಹಕ್ಕಿಲ್ಲ. ಚುನಾವಣೆ ಮುಗಿದರೂ ಜಾತಿಗಣತಿ ಜಾರಿಯಾಗಬೇಕು. ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಮಾತು ಕೊಟ್ಟಿತ್ತು. ಈ ಗಣತಿಗಾಗಿ 200 ಕೋಟಿ ರೂ. ವ್ಯಯಿಸಲಾಗಿದೆ ಎಂದರು.
ಹೀಗಾದರೆ ದಲಿತರಿಗೆ ಶೋಷಿತರಿಗೆ ಆದಿವಾಸಿಗಳಿಗೆ ಹೇಗೆ ನ್ಯಾಯ ಸಿಗಲು ಸಾಧ್ಯ. ಸರ್ಕಾರಕ್ಕೆ ಬಿಡುಗಡೆ ಮಾಡÀಲು ಮನಸ್ಸಿಲ್ಲವೇ ಎಂದು ಪ್ರಶ್ನಿಸಿದ ಅವರು, ಕೇಂದ್ರದಲ್ಲಿಯೂ ಒತ್ತಡ ಹಾಕಿ ದೇಶದಾದ್ಯತಂತ ಜಾತಿ ಗಣತಿ ಮಾಡಲು ನಿತಿಶ್ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಒತ್ತಡ ಹಾಕಬೇಕು ಎಂದರು.
ಹಿಂದುತ್ವದ ಯುಸಿಸಿ ಅಲ್ಲ ಸಂವಿಧಾನ ಪರ ಯುಸಿಸಿ ಪರ ನಾನು ಇದ್ದೇನೆ. ಜೊತೆಗೆ ಒನ್ ನೇಷನ್ ಒನ್ ಎಲೆಕ್ಷನ್ ಪರವಾಗಿ ನಾನಿಲ್ಲ. ವಿವಿಧ ಪಕ್ಷಗಳ ನಾಯಕರಿಗೆ ಇದು ಗೊತ್ತಿದೆ. ಆದರೆ, ಎನ್ಡಿಎನಲ್ಲಿ ಸೇರಿಕೊಂಡಿರುವುದರಿಂದ ಈ ಬಗ್ಗೆ ಮಾತನಾಡುತ್ತಿಲ್ಲ. ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಜನರ ಪರ ನಿಲ್ಲುವರೆಂಬ ನಂಬಿಕೆ ಇದೆ ಎಂದರು.

