ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಮಳೆ ಉತ್ತಮವಾಗಿ ಸುರಿದಿದೆ. ಈ ಹಿನ್ನೆಲೆಯಲ್ಲಿ ಹೊಳಲ್ಕೆರೆ ತಾಲ್ಲೂಕಿನಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.
ಆದರೆ ಈ ಬಾರಿ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಬೆಲೆಯನ್ನು ರಾಜ್ಯಸರ್ಕಾರ ಯದ್ವತದ್ವಾ ಏರಿಸಿ ರೈತರು ಬಿತ್ತನೆ ಮಾಡಲು ಆರ್ಥಿಕ ಸಮಸ್ಯೆ ತಂದೊಡ್ಡಿದೆ ಎಂದು ಆರೋಪಿಸಿ ಹೊಳಲ್ಕೆರೆಯಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಸಿದ್ದವೀರಪ್ಪ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಈಚಘಟ್ಟದ ಸಿದ್ದವೀರಪ್ಪ “ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಉತ್ತಮವಾಗೇನೊ ಬರುತ್ತಿದೆ. ಆದರೆ ರೈತರು ಬಿತ್ತನೆ ಮಾಡಲು ಅಸಾಧ್ಯ ಎಂಬ ರೀತಿ ಬಿತ್ತನೆ ಬೀಜಗಳು ಹಾಗೂ ಎಲ್ಲಾ ರಸಗೊಬ್ಬರಗಳ ಬೆಲೆಗಳನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ.
ಇನ್ನಾದರೂ ರಾಜ್ಯದಲ್ಲಿ ರೈತರು ಬಿತ್ತನೆ ಮಾಡಲು ಅನುಕೂಲವಾಗುವಂತೆ ಬಿತ್ತನೆ ಬೀಜಗಳ ಬೆಲೆ ಮತ್ತು ಎಲ್ಲಾ ರಸಗೊಬ್ಬರಗಳ ಬೆಲೆಯನ್ನು ಕಡಿಮೆ ಮಾಡಬೇಕೆಂದು ರಾಜ್ಯಸರ್ಕಾರಕ್ಕೆ ಒತ್ತಾಯಿಸಿದರು.

