ಬೆಂಗಳೂರು: ನ್ಯಾನೊ ತಂತ್ರಜ್ಞಾನ ಕ್ಷೇತ್ರದ ಭಾರತದ ಅತ್ಯಂತ ಪ್ರಮುಖ ಕಾರ್ಯಕ್ರಮ “ಬೆಂಗಳೂರು ಇಂಡಿಯಾ ನ್ಯಾನೊದ 13 ನೇ ಆವೃತ್ತಿ”ಯನ್ನು ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಮತ್ತು ವಿಜ್ಞಾನ & ತಂತ್ರಜ್ಞಾನ ಸಚಿವ ಎನ್.ಬೋಸರಾಜು ಅಧಿಕೃತವಾಗಿ ಘೋಷಣೆ ಮಾಡಿದರು.
ಮೂರು ದಿನಗಳ ಈ ಕಾರ್ಯಕ್ರಮ ಆಗಸ್ಟ್ 1 ರಿಂದ 3 ರವರೆಗೆ ಬೆಂಗಳೂರಿನ “ದಿ ಲಲಿತ್ ಹೊಟೇಲ್”ನಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ವಿಜ್ಞಾನ & ತಂತ್ರಜ್ಞಾನ ಇಲಾಖೆ, ಕರ್ನಾಟಕ ಸೈನ್ಸ್ & ಟೆಕ್ನಾಲಾಜಿ ಪ್ರಮೋಶನ್ ಸೊಸೈಟಿ (KSTePS) ಹಾಗೂ ಜವಾಹರ್ಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್÷್ಡ ಸೈಂಟಿಫಿಕ್ ರೀಸರ್ಚ್ (JNCASR) ಸಂಸ್ಥೆಗಳು ಆಯೋಜಿಸಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎನ್.ಬೋಸರಾಜು, “ಪ್ರಸ್ತುತ ಮಾನವ ಎದುರಿಸುತ್ತಿರುವ ಅತಿ ದೊಡ್ಡ ಸವಾಲುಗಳನ್ನು ಗುರುತಿಸಲು ಹೊರಟರೆ ಆ ಪಟ್ಟಿಯಲ್ಲಿ ಹವಾಮಾನ ಬದಲಾವಣೆ, ಕ್ಷೀಣವಾಗುತ್ತಿರುವ ಇಂಧನ ಮೂಲ ಮತ್ತು ಆರೋಗ್ಯ ಸಮಸ್ಯೆಗಳು ಮೊದಲ ಸ್ಥಾನಗಳಲ್ಲಿ ನಿಲ್ಲುತ್ತವೆ. ಸುಸ್ಥಿರತೆ ಎಂಬುದು ಕೇವಲ ಬಜ್ವರ್ಡ್ ಇದ್ದಂತೆ ಅಲ್ಲ. ಆದರೆ, ಪ್ರಸ್ತುತ ಅದು ಅನಿವಾರ್ಯವಾಗಿದೆ. ಹವಾಮಾನ ಬದಲಾವಣೆಯಿಂದ ಆಗುತ್ತಿರುವ ಪರಿಣಾಮಗಳು ನಮಗೆ ಹೆಚ್ಚಾಗಿ ಕಾಣತೊಡಗಿವೆ ಎಂದರು.
ಈ ನ್ಯಾನೊ ತಂತ್ರಜ್ಞಾನವು ಗಾತ್ರದಲ್ಲಿ ಸಣ್ಣದಾಗಿದ್ದರೂ, ಹೆಚ್ಚಿನ ಪರಿಣಾಮಕಾರಿ ಪರಿಹಾರಗಳನ್ನು ನೀಡುವ ಭರವಸೆಯನ್ನು ಹೊಂದಿದೆ. ಇದು ಈ ಜಾಗತಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ನಾವು ಕೈಗೊಳ್ಳುತ್ತಿರುವ ವಿಧಾನಗಳನ್ನು ಸಮರ್ಥವಾಗಿ ಕ್ರಾಂತಿಕಾರಕಗೊಳಿಸಬಹುದು. ಈ ಹಿನ್ನೆಲೆಯಲ್ಲಿ ಬೆಂಗಳೂರು ಇಂಡಿಯಾ ನ್ಯಾನೊ- ೨೦೨೪ ರ ಈ ಆವೃತ್ತಿಯ ವಿಷಯ ಸುಸ್ಥಿರತೆಗಾಗಿ ನ್ಯಾನೊ ತಂತ್ರಜ್ಞಾನ: ಹವಾಮಾನ, ಇಂಧನ ಮತ್ತು ಆರೋಗ್ಯ ರಕ್ಷಣೆ’ ಯಾಗಿದೆ’’ ಎಂದು ತಿಳಿಸಿದರು.
ನ್ಯಾನೊ ವಿಜ್ಞಾನಕ್ಕೆ ತಮ್ಮದೇ ಕೊಡುಗೆ ನೀಡಿರುವ ಪ್ರೊಫೆಸರ್ ಸಿ.ಎನ್.ಆರ್.ರಾವ್ ಹೆಸರಿನಲ್ಲಿ ಪ್ರೊಫೆಸರ್ ಸಿ.ಎನ್.ಆರ್.ರಾವ್ ಬೆಂಗಳೂರು ಇಂಡಿಯಾ ನ್ಯಾನೊ ಸೈನ್ಸ್ ಅವಾರ್ಡ್’ ಈ ಕಾರ್ಯಕ್ರಮದಲ್ಲಿ ನೀಡಲಾಗುತ್ತಿದೆ. ನ್ಯಾನೊ ಟೆಕ್ನಲ್ಲಿ ನವೀನ ಮತ್ತು ಕ್ರಾಂತಿಕಾರಿ ತಂತ್ರಜ್ಞಾನ ಅಭಿವೃದ್ಧಿಗಾಗಿಬೆಂಗಳೂರು ಇಂಡಿಯಾ ನ್ಯಾನೊ ಇನ್ನೋವೇಶನ್ ಅವಾರ್ಡ್’ ಸಹ ನೀಡಲಾಗುತ್ತಿದೆ. ಇದೇ ವೇಳೆ, ಭವ್ಯ ಸಮಾರಂಭದಲ್ಲಿ ಕರ್ನಾಟಕ ಡಿಎಸ್ಟಿ ನ್ಯಾನೊ ಸೈನ್ಸ್ ಫೆಲೋಶಿಪ್ಗಳನ್ನೂ ನೀಡಲಾಗುತ್ತದೆ.
ಇದಲ್ಲದೇ, ನ್ಯಾನೊ ಸೈನ್ಸ್ ವಿಭಾಗದಲ್ಲಿ ಅತ್ಯುತ್ತಮ ಸಂಶೋಧಕರಿಗೆ ನ್ಯಾನೊ ಎಕ್ಸಲೆನ್ಸ್ ಪ್ರಶಸ್ತಿ, ಕ್ರಾಂತಿಕಾರಿ ಸಂಶೋಧನೆ ಮಾಡುವ ಅತ್ಯುತ್ತಮ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಪೋಸ್ಟರ್ ಪ್ರಶಸ್ತಿ, ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.

