ಇಂದು ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಎರಡು ಪ್ರತ್ಯೇಕ ಜಾಮೀನು ಅರ್ಜಿ ವಿಚಾರಣೆ
ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನಿಗಾಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಇಂದು ಮಧ್ಯಾಹ್ನ ವಿಚಾರಣೆ ನಡೆಯಲಿದೆ.
ಸಿಐಡಿ ಪೊಲೀಸರು ದಾಖಲು ಮಾಡಿರುವ ಪ್ರಕರಣ ಮತ್ತು ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಪರ ವಕೀಲರು ಪ್ರತ್ಯೇಕ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಈ ಎರಡು ಅರ್ಜಿಗಳು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠದ ಮುಂದೆ ವಿಚಾರಣೆಗೆ ಬರಲಿವೆ.
ಶುಕ್ರವಾರ ಮಧ್ಯಾಹ್ನ 2.30 ಕ್ಕೆ ಜಾಮೀನಿ ಅರ್ಜಿಯ ವಿಚಾರಣೆ ಗೆ ಸಮಯ ನಿಗದಿಯಾಗಿದ್ದು, ಶುಕ್ರವಾರ ಮತ್ತು ಅವಮಾಸ್ಯೆ ತಮ್ಮ ಮಗನ ಕೈಹಿಡಿಯಲಿದೆ ಎಂಬ ನಿರೀಕ್ಷೆಯಲ್ಲಿ ಎಚ್.ಡಿ. ರೇವಣ್ಣ ಕುಟುಂಬವಿದೆ. ಭವಾನಿ ರೇವಣ್ಣ ಬಂಧನ ಭೀತಿಯಲ್ಲಿದ್ದಾಗ, ಇದೇ ಪೀಠದ ಮುಂದೆ ಅವರಿಗೆ ರಿಲೀಪ್ ಸಿಕ್ಕಿದ್ದು, ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು.
ಈ ಪ್ರಕರಣಗಳಲ್ಲಿ ಪ್ರಜ್ವಲ್ ರೇವಣ್ಣಗೆ ಜಾಮೀನು ನಿರಾಕರಿಸಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೂನ್ 26 ರಂದು ಆದೇಶ ಹೊರಡಿಸಿತ್ತು. ಹೀಗಾಗಿ, ಹೈಕೋರ್ಟ್ ನಲ್ಲಿ ಎರಡು ಪ್ರಕರಣಗಳಿಗೆ ನಿರೀಕ್ಷಣಾ ಜಾಮೀನು ಮತ್ತೊಂದು ಪ್ರಕರಣದಲ್ಲಿ ರೆಗ್ಯುಲರ್ ಜಾಮೀನಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ.

