ಅಪರಾಧ ಸುದ್ದಿ

ಚಾರ್ಜರ್ ಹಾಕಿದ್ದ ಮೊಬೈಲ್ ಬಳಸಿ, ಪಿಜಿಯಲ್ಲಿದ್ದ ಬೀದರ್ ಮೂಲದ ವಿದ್ಯಾರ್ಥಿ ಸಾವು

Share It

ಬೆಂಗಳೂರು: ಮೊಬೈಲ್ ನಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ಅಪಾಯವಿದೆ. ಯಾಮಾರಿದರೆ, ಅದರಿಂದ ಅಪಾಯವೇ ಹೆಚ್ಚು ಎಂಬುದಕ್ಕೆ ಇದು ತಾಜಾ ಉದಾಹರಣೆ.

ಮೊಬೈಲ್ ಚಾರ್ಜ್ ಮಾಡುವಾಗ ಮಾತನಾಡುವ ಮೂಲಕ ಅಜಾಗರೂಕತೆ ತೋರಿದ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಬಸವೇಶ್ವರ ಠಾಣಾ ವ್ಯಾಪ್ತಿಯ ಮಂಜುನಾಥ ನಗರದ‌ಲ್ಲಿ ನಡೆದಿದೆ.

ಬೀದರ್ ಮೂಲದ ಶ್ರೀನಿವಾಸ್ (24) ಸಾವನ್ನಪ್ಪಿದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಬೆಂಗಳೂರಲ್ಲಿ ಸಾಫ್ಟ್‌ವೇರ್ ಕೋರ್ಸ್ ಮಾಡುತ್ತಿದ್ದ ಶ್ರೀನಿವಾಸ್, ಮಂಜುನಾಥ ನಗರದ ಪಿ.ಜಿ.ಯಲ್ಲಿ ವಾಸವಿದ್ದ. ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ರೂಮಿನಲ್ಲಿದ್ದ ಶ್ರೀನಿವಾಸ್, ಮೊಬೈಲ್ ಚಾರ್ಜ್ ಹಾಕುವಾಗ ವಿದ್ಯುತ್ ಪ್ರವಹಿಸಿದೆ. ಪರಿಣಾಮ ಶ್ರೀನಿವಾಸ್ ಸಾವನ್ನಪ್ಪಿದ್ದಾನೆ.

ರೂಮ್ ಹೊರಗಿದ್ದ ಆತನ ಸ್ನೇಹಿತ ಸ್ವಲ್ಪ ಸಮಯದ ಬಳಿಕ ಶ್ರೀನಿವಾಸ್’ನನ್ನ ಊಟಕ್ಕೆ ಕರೆಯಲು ಹೋದಾಗ ಆತ ನೆಲಕ್ಕೆ ಬಿದ್ದಿರುವುದನ್ನ ಗಮನಿಸಿದ್ದಾರೆ. ಶ್ರೀನಿವಾಸ್’ನನ್ನ ಎಬ್ಬಿಸಲು ಯತ್ನಿಸುವಾಗ ಸ್ನೇಹಿತನಿಗೂ ವಿದ್ಯುತ್ ಪ್ರವಹಿಸಿದೆ. ಆದರೆ ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ತಕ್ಷಣ ಬಸವೇಶ್ವರ ನಗರ ಠಾಣಾ ಪೊಲೀಸರಿಗೆ ಪಿ.ಜಿ.ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬಸವೇಶ್ವರ ನಗರ ಠಾಣಾ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Share It

You cannot copy content of this page