ಸುದ್ದಿ

ಛಲವಾದಿ ನಾರಾಯಣಸ್ವಾಮಿ ಪರಿಷತ್ ವಿ.ಪಕ್ಷ ನಾಯಕ!

Share It


ಬೆಂಗಳೂರು: ಕರ್ನಾಟಕ ವಿಧಾನಪರಿಷತ್ ವಿಪಕ್ಷ ನಾಯಕರಾಗಿ ಛಲವಾದಿ ನಾರಾಯಣಸ್ವಾಮಿ ನೇಮಕಗೊಂಡಿದ್ದಾರೆ.

ವಿಧಾನ ಪರಿಷತ್ ವಿಪಕ್ಷ ನಾಯನಾಗಿದ್ದ ಶ್ರೀನಿವಾಸ ಪೂಜಾರಿ ಉಡುಪಿ-ಚಿಕ್ಕಮಗಳೂರಿನಿಂದ ಸಂಸತ್ತಿಗೆ ಆಯ್ಕೆಯಾದ ನಂತರ ಈ ಸ್ಥಾನ ತೆರವಾಗಿತ್ತು. ಮೇಲ್ಮನೆಯಲ್ಲಿ ಪ್ರಬಲ ನಾಯಕನ ಅಗತ್ಯವನ್ನು ಮನಗಂಡ ಬಿಜೆಪಿ, ಚಿಕ್ಕಮಗಳೂರಿನಿಂದ ಪರಾಭವಗೊಂಡಿದ್ದ ಮಾಜಿ ಶಾಸಕ ಸಿ.ಟಿ.ರವಿ ಅವರನ್ನು ಮೇಲ್ಮನೆಗೆ ಆಯ್ಕೆ ಮಾಡಿತ್ತು.

ಆದರೆ ಇಲ್ಲಿಯವರೆಗೆ, ಪಕ್ಷವು ವಿಪಕ್ಷ ನಾಯಕನ ಸ್ಥಾನವನ್ನು ಅಧಿಕೃತಗೊಳಿಸಿಲ್ಲ. ಇದೀಗ ಮುಂಗಾರು ಅಧಿವೇಶನ ನಡೆಯುತ್ತಿರುವ ಮಧ್ಯೆ ಬಿಜೆಪಿ ಅಂತಿಮವಾಗಿ ಛಲವಾದಿ ನಾರಾಯಣಸ್ವಾಮಿ ಅವರನ್ನು ವಿಧಾನ ಪರಿಷತ್ ವಿಪಕ್ಷ ನಾಯಕನನ್ನಾಗಿ ನೇಮಕ ಮಾಡಿದೆ. ಇದರಿಂದ ಪರಿಷತ್ ವಿಪಕ್ಷ ನಾಯಕನ ಹುದ್ದೆ ರೇಸ್​ನಲ್ಲಿದ್ದ ಸಿ.ಟಿ ರವಿ ಮತ್ತು ಎನ್.‌ ರವಿಕುಮಾರ್ ಅವರಿಗೆ ನಿರಾಸೆಯಾಗಿದೆ.

ಕೋಟಾ ಶ್ರೀನಿವಾಸ್ ಪೂಜಾರಿ ರಾಜೀನಾಮೆಯಿಂದ ತೆರವಾದ ಪರಿಷತ್ ವಿಪಕ್ಷ ನಾಯಕನ ಸ್ಥಾನಕ್ಕೆ ಬಿಜೆಪಿಯಲ್ಲಿ ಪೈಪೋಟಿ ನಡೆದಿತ್ತು. ಸಿಟಿ ರವಿ, ಎನ್​. ರವಿಕುಮಾರ್ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರ ನಡುವೆ ಭಾರೀ ಪೈಪೋಟಿ ನಡೆದಿತ್ತು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್​ ಸಂತೋಷ್​ಗೆ ಸಿ.ಟಿ ರವಿ ಅಥವಾ ರವಿಕುಮಾರ್​ ಅವರನ್ನ ವಿಪಕ್ಷ ನಾಯಕನ್ನಾಗಿ ಮಾಡಬೇಕೆನ್ನುವುದು ಇತ್ತು. ಆದ್ರೆ ಇತ್ತ ಬಿ.ಎಸ್ ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಛಲವಾದಿ ನಾರಾಯಣಸ್ವಾಮಿ ಅವರನ್ನೇ ಮಾಡಬೇಕೆಂದು ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ ಅಪ್ಪ-ಮಗನ ಬೇಡಿಕೆ ಹೈಕಮಾಂಡ್​ ಗ್ರೀನ್​ ಸಿಗ್ನಲ್ ನೀಡಿದೆ.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು ಎನ್. ರವಿಕುಮಾರ್ ಅವರನ್ನು ಮರು ಆಯ್ಕೆ ಮಾಡಿತ್ತು. ಇದರ ಜೊತೆಗೆ, ಅಸೆಂಬ್ಲಿ ಚುನಾವಣೆಯಲ್ಲಿ ಸೋಲುಂಡಿದ್ದ ಸಿ.ಟಿ.ರವಿ ಅವರನ್ನು ಮೇಲ್ಮನೆಗೆ ಕಳುಹಿಸಿತ್ತು. ಹಿಂದುತ್ವ ಫೈರ್ ಬ್ಯಾಂಡ್ ಎಂದೇ ಗುರುತಿಸಲ್ಪಟ್ಟಿರುವ ಸಿ.ಟಿ ರವಿ ಹಾಗೂ ಎನ್‌. ರವಿಕುಮಾರ್ ನಡುವೆ ಈ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆದಿತ್ತು. ಛಲವಾದಿ ನಾರಾಯಣ ಸ್ವಾಮಿ ಹೆಸರು ಅಷ್ಟಾಗಿ ಕೇಳಿಬಂದಿರಲಿಲ್ಲ.

ಸಿಟಿ ರವಿ ತಮ್ಮ ಆಕ್ರಮಣಕಾರಿ ಮಾತುಗಾರಿಕೆ ಮೂಲಕ ಗುರುತಿಸಿಕೊಂಡವರು. ವಿಧಾನಸಭೆಯಲ್ಲಿ ಇದ್ದಾಗಲೂ ಸಿಕ್ಕ ಅವಕಾಶವನ್ನು ಬಳಸಿಕೊಂಡು ಎದುರಾಳಿ ವಿರುದ್ಧ ದಾಳಿ ಮಾಡುವಲ್ಲಿ ನಿಸ್ಸೀಮರು. ಅದೇ ರೀತಿಯಲ್ಲಿ ಎನ್‌ ರವಿಕುಮಾರ್‌ ಕೂಡಾ ಚತುರ ಮಾತುಗಾರರು. ಆಡಳಿತ ಪಕ್ಷ ಕಾಂಗ್ರೆಸ್‌ಗೂ ವಿರೋಧ ಪಕ್ಷವನ್ನು ಎದುರಿಸುವುದು ಸವಾಲಾಗಿದೆ. ಈ ನಿಟ್ಟಿನಲ್ಲಿ ಇವರಿಬ್ಬರಲ್ಲಿ ಒಬ್ಬರನ್ನು ವಿಪಕ್ಷ ನಾಯಕನನ್ನು ಮಾಡಿದರೆ ಆಡಳಿತ ಪಕ್ಷವನ್ನು ಇನ್ನಷ್ಟು ಕಟ್ಟಿಹಾಕಬಹುದು ಎನ್ನುವ ಲೆಕ್ಕಾಚಾರ ಕೆಲ ನಾಯಕರಲ್ಲಿ ಇತ್ತು.

ಈ ಬಗ್ಗೆ ಪಕ್ಷದ ಆಂತರಿಕ ವಲಯದಲ್ಲೂ ಚರ್ಚೆಗಳು ನಡೆದಿದ್ದವು. ಹೀಗಾಗಿ ವಿಧಾನ ಪರಿಷತ್ತಿನಲ್ಲಿ ವಿಪಕ್ಷದ ನಾಯಕರಾಗಿ ಒಂದೋ ಎನ್. ರವಿ ಕುಮಾರ್ ಇಲ್ಲವೇ, ಸಿ.ಟಿ.ರವಿ ಆಯ್ಕೆಯಾಗಬಹುದು ಎಂದೇ ಲೆಕ್ಕಾಚಾರವಾಗಿತ್ತು.

ಒಕ್ಕಲಿಗ ಸಮುದಾಯಕ್ಕೆ ಸೇರಿದ ಅಶೋಕ್ ಅವರು ವಿಧಾನಸಭೆ ವಿಪಕ್ಷ ನಾಯಕರಾಗಿದ್ದಾರೆ. ಈಗ ಮತ್ತೆ ಪರಿಷತ್​ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಅದೇ ಒಕ್ಕಲಿಗೆ ಸಮುದಾಯಕ್ಕೆ ಸೇರಿದ ಸಿಟಿ ರವಿ ಅವರಿಗೆ ನೀಡಿದರೆ ಹೇಗೆ ಎನ್ನುವ ಪ್ರಶ್ನೆಗಳು ಶುರುವಾಗಿದ್ದವು. ಹೀಗಾಗಿ ಕೊನೆ ಕ್ಷಣದಲ್ಲಿ ರೇಸ್​ನಲ್ಲಿ ಛಲವಾದಿ ನಾರಾಯಣಸ್ವಾಮಿ ಹೆಸರು ಸಹ ಮುನ್ನೆಲೆಗೆ ಬಂತು. ಆಗ ಕೋಲಿ ಸಮುದಾಯದ ರವಿ ಕುಮಾರ್ ಹಾಗೂ ಛಲವಾದಿ ನಾರಾಯಣಸ್ವಾಮಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ಆದ್ರೆ, ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ಮಾತ್ರ ಛಲವಾದಿ ನಾರಾಯಣಸ್ವಾಮಿ ಅವರನ್ನೇ ವಿಪಕ್ಷ ನಾಯಕನ್ನಾಗಿ ನೇಮಕ ಮಾಡಬೇಕೆಂದು ಹೈಕಮಾಂಡ್​ ಬಳಿ ಲಾಬಿ ಮಾಡಿದ್ದರು ಎನ್ನಲಾಗಿದೆ.

ಅದರಂತೆ ಇದೀಗ ಹೈಕಮಾಂಡ್​ ಅಪ್ಪ ಮಗನ ಮಾತಿಗೆ ತಲೆದೂಗಿ ಅಂತಿಮವಾಗಿ ಛಲವಾದಿ ನಾರಾಯಣಸ್ವಾಮಿ ಅವರನ್ನೇ ಪರಿಷತ್​ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲು ಗ್ರೀನ್ ಸಿಗ್ನಲ್ ನೀಡಿದೆ.


Share It

You cannot copy content of this page