ಹೊಸಪೇಟೆ: ಇಲ್ಲಿಗೆ ಸಮೀಪದಲ್ಲಿರುವ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿಯ ತುಂಗಭದ್ರಾ ಜಲಾಶಯದ 19ನೇ ಕ್ರೆಸ್ಟ್ ಗೇಟ್ ಮುರಿದು ನೀರಿನಲ್ಲಿ ಕೊಚ್ಚಿಕೊಂಡು ಹೋದ ನಂತರ ಕಲ್ಯಾಣ ಕರ್ನಾಟಕದ 4 ಜಿಲ್ಲೆಗಳ ರೈತರು ಮತ್ತು ಜನಸಾಮಾನ್ಯರಲ್ಲಿ ಭಾರಿ ಆತಂಕ ಸೃಷ್ಟಿಯಾಗಿದೆ.
ಇದೀಗ ಡ್ಯಾಂನಲ್ಲಿ ಮುರಿದು ಹೋಗಿರುವ ಕ್ರಸ್ಟ್ ಗೇಟ್ ಜಾಗದಲ್ಲಿ ಹೊಸದನ್ನು ಅಳವಡಿಸುವ ಕೆಲಸ ಇಂದು ಸಾಯಂಕಾಲದಿಂದ ಆರಂಭವಾಗಿದೆ ಮತ್ತು ಅದನ್ನು ಹೇಗೆ ಅಳವಡಿಸಲಾಗುತ್ತದೆ? ಮತ್ತು ಗೇಟ್ ಗಳನ್ನು ಹೇಗೆ ಆಪರೇಟ್ ಮಾಡಲಾಗುತ್ತದೆ? ಎಂಬ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.
ಚೇನ್ ಲಿಂಕ್ ಕಟ್ ಆಗಿದ್ದಕ್ಕೆ 19 ನೇ ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿತ್ತು. ಈ ಚೇನ್ ಗಳ ನೆರವಿನಿಂದ ಕ್ರಸ್ಟ್ ಗೇಟ್ ಗಳನ್ನು ಓಪನ್ ಮತ್ತು ಮುಚ್ಚುವ ಕೆಲಸ ಮಾಡಲಾಗುತ್ತೆ. ಇನ್ನು ಹೊಸ ಗೇಟ್ ಅಳವಡಿಸುವ ಕೆಲಸವನ್ನು 2 ಸ್ಥಳೀಯ ಇಂಜಿನೀಯರಿಂಗ್ ಸಂಸ್ಥೆಗಳಿಗೆ ನೀಡಲಾಗಿದ್ದು ಕ್ರೇನ್ ಗಳ ಮೂಲಕ ಅದನ್ನು ಮಾಡಲಾಗುವುದು ಎಂದು ತಿಳಿದುಬಂದಿದೆ. ಆದರೆ ಜಲಾಶಯದಲ್ಲಿ ಇನ್ನೂ ಸಾಕಷ್ಟು ನೀರು ಇರೋದ್ರಿಂದ ಕ್ರೇನ್ ಗಳನ್ನು ಬಳಸಿ ಮತ್ತು ಗೇಟ್ ನ 5 ಪ್ಲೇಟ್ ಗಳನ್ನು ಜೋಡಿಸುವುದು ಬೃಹತ್ ಸವಾಲಿನ ಕೆಲಸವಾಗಲಿದೆ.

