ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿಯಾಗಿ ಜಿ ಸತ್ಯವತಿ ನೇಮಕ
ಬೆಂಗಳೂರು: ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿ ಹುದ್ದೆ ನಿರೀಕ್ಷಣೆಯಲ್ಲಿದ್ದ ಜಿ. ಸತ್ಯವತಿ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಜತೆಗೆ ರಾಮ್ ಪ್ರಸಾತ್ ಮನೋಹರ್ ಸೇರಿದಂತೆ ಕೆಲವು ಐಎಎಸ್ ಅಧಿಕಾರಿಗಳನ್ನು ವಿವಿಧ ಇಲಾಖೆಗಳಿಗೆ ವರ್ಗಾವಣೆ ಮಾಡಲಾಗಿದೆ. ರಾಮ್ ಪ್ರಸಾತ್ ಮನೋಹರ್ ಅವರನ್ನು ಜಲಮಂಡಳಿ ಅಧ್ಯಕ್ಷರಾಗಿ ಮರುನೇಮಕ ಮಾಡಿದ್ದರೆ, ಕೆ.ಬಿ.ಶಿವಕುಮಾರ್ ಅವರನ್ನು ಆರೋಗ್ಯ ಇಲಾಖೆಯ ಆಯುಕ್ತರನ್ನಾಗಿ ನೇಮಿಸಿದೆ. ಜತೆಗೆ ರಾಜ್ಯ ವಿಕೋಪ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಹುದ್ದೆಯನ್ನು ಹೆಚ್ಚುವರಿಯಾಗಿ ಸೃಷ್ಟಿಸಿದೆ.
ಡಿ.ಎಸ್.ರಮೇಶ್ ಅವರನ್ನು ತೋಟಗಾರಿಕಾ ಇಲಾಖೆ ನಿರ್ದೇಶಕರನ್ನಾಗಿ ನೇಮಿಸಿದ್ದು, ಎಂ.ಆರ್. ರವಿಕುಮಾರ್ ಅವರನ್ನು ಕಬ್ಬು ಮತ್ತು ಸಕ್ಕರೆ ಆಯುಕ್ತಾಲಯದ ಆಯುಕ್ತರನ್ನಾಗಿ ನೇಮಿಸಿದೆ. ಎಂ.ಎಸ್. ಅರ್ಚನಾ ಅವರು ಪಶ್ಚಿಮ ವಲಯ ಬಿಬಿಎಂಪಿಗೆ ಆಯುಕ್ತೆಯಾಗಿ ನೇಮಕವಾಗಿದ್ದರೆ, ಎಸ್. ನವೀನ್ ಕುಮಾರ್ ರಾಜು ಅವರನ್ನು ರಾಜ್ಯ ಖನಿಜ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.
ಗರಿಮಾ ಪನ್ವಾರ್ ಅವರನ್ನು ಡಿಜಿಟಲ್ ಆರೋಗ್ಯ ಮತ್ತು ಕುಟುಂಭ ಕಲ್ಯಾಣ ಇಲಾಖೆಯ ನಿರ್ದೇಶಕಿಯಾಗಿ ನೇಮಿಸಿದ್ದು, ಪಾಟೀಲ್ ಭುವನೇಶ್ ದೇವದಾಸ್ ಅವರನ್ನು ಕೋಲಾರ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ನೇಮಿಸಿದೆ. ಸದಾಶಿವ ಪ್ರಭು ಅವರನ್ನು ಬಿಎಂಟಿಸಿಯ ಭದ್ರತೆ ಮತ್ತು ಜಾಗೃತಿ ವಿಭಾಗದ ನಿರ್ದೇಶಕರನ್ನಾಗಿ ನೇಮಿಸಿದ್ದು, ಲಾವಿಶ್ ಒರ್ಡಿಯಾ ಅವರನ್ನು ಯಾದಗಿರಿ ಜಿಲ್ಲಾ ಪಂಚಾಯಿತಿಯ ಸಿಇಒ ಆಗಿ ನೇಮಿಸಲಾಗಿದೆ.


