ಸುದ್ದಿ

ದಲಿತ ಪದವಿಧರ ಅಂಗನವಾಡಿ ಸಹಾಯಕಿ:ಕೇಂದ್ರವನ್ನೇ ಮುಚ್ಚಿಸಿದ ಮೇಲ್ವರ್ಗದ ಜನ

Share It

ನವದೆಹಲಿ: ದಲಿತ ಪದವೀಧರೆ ಅಂಗನವಾಡಿ ಸಹಾಯಕಿಯಾಗಿ ನೇಮಕವಾದ ಕಾರಣಕ್ಕೆ ತಮ್ಮೂರಿನ ಅಂಗನವಾಡಿ ಕೇಂದ್ರವನ್ನೇ ಮೇಲ್ವರ್ಗದ ಜನರು ಮುಚ್ಚಿಸಿರುವ ಘಟನೆ ಓಡಿಶಾದ ಕೇಂದ್ರಪದ ರಾಜನಗರ ಬ್ಲಾಕ್‌ನಲ್ಲಿ ನಡೆದಿದೆ.

ಇಲ್ಲಿನ ಘಡಿಯಾಮಲ ಗ್ರಾಮ ಪಂಚಾಯತ್ ವ್ಯಾಪ್ತಿಯ ನುಂಗಾವ್ ಅಂಗನವಾಡಿ ಕೇಂದ್ರಕ್ಕೆ ಶರ್ಮಿಷ್ಠಾ ಸೇಥಿ ಎಂಬ 23 ವರ್ಷದ ದಲಿತ ಪದವೀದರೆಯನ್ನು ಸಹಾಯಕಿಯಾಗಿ ನೇಮಿಸಲಾಗಿತ್ತು. ಆದರೆ, ಮೇಲ್ವರ್ಗದ ಸದಸ್ಯರನ್ನೊಳಗೊಂಡ ಗ್ರಾಮಸಮಿತಿ, ಇದನ್ನು ವಿರೋಧಿಸಿ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವುದನ್ನೇ ನಿಷೇಧಿಸಿದೆ.

ಅಂಗನವಾಡಿಗೆ ಸುಮಾರು 60 ಮಕ್ಕಳು ಬರುತ್ತಿದ್ದು, ಗ್ರಾಮಸಮಿತಿಯ ತೀರ್ಮಾನದಿಂದ ಅವರ ಭವಿಷ್ಯ ಅತಂತ್ರವಾಗಿದೆ. ಮೇಲ್ವರ್ಗದ ಜನರ ಮನವೊಲಿಸಲು ಅಧಿಕಾರಿಗಳು ಪ್ರಯತ್ನಪಟ್ಟು ವಿಫಲವಾಗಿದ್ದಾರೆ.

ಗ್ರಾಮದಲ್ಲಿ ಏಳು ದಲಿತ ಕುಟುಂಬಗಳು ಸೇರಿ 45 ಕುಟುಂಬಗಳು ವಾಸವಿದೆ. ಅಂಗನವಾಡಿ ಕಾರ್ಯಕರ್ತೆ ಲಿಜಾರಾಣಿ ಪಾಂಡವ್ ಮೇಲ್ಜಾತಿಯವರಾಗಿದ್ದು, ನಿಮ್ಮ ಮಕ್ಕಳಿಗೆ ದಲಿತ ಸಹಾಯಕಿಯಿಂದ ಅಡುಗೆ ಮಾಡಿಸುವುದಿಲ್ಲ ಎಂದು ಗ್ರಾಮಸ್ಥರಿಗೆ ಹೇಳಿದ್ದರು. ಇದನ್ನು ಸೇಥಿ ಕುಟುಂಬಸ್ಥರು ವಿರೋಧಿಸಿದ್ದರು.

ಸಹಾಯಕಿಯ ಕುಟುಂಬದ ವಿರೋಧದ ನಂತರ ಆಕೆಯನ್ನು ಅಡುಗೆ ಮಾಡುದಂತೆ ತಡೆಯುವ ಪ್ರಯತ್ನ ನಡೆಯಿತು. ಆದರೆ, ಆಕೆ ಅದನ್ನು ನಿರಾಕರಿಸಿದಾಗ ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವುದನ್ನೇ ಗ್ರಾಮಸ್ಥರು ನಿಲ್ಲಿಸಿದ್ದಾರೆ. ದಲಿತ ಸಮುದಾಯದ ಮಕ್ಕಳೂ ಅಂಗನವಾಡಿಗೆ ಹೋಗದಂತೆ ತಾಕೀತು ಮಾಡಿದ್ದಾರೆ.

ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಮತ್ತು ತಹಸೀಲ್ದಾರ್ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ, ಗ್ರಾಮಸ್ಥರು ಅವರ ಮನವಿಗೆ ಕೂಡ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸುವವರ ವಿರುದ್ಧ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುವಂತೆ ದಲಿತ ಸಂಘಟನೆಗಳು ಒತ್ತಾಯ ಮಾಡಿದ್ದು, ಸೌಹಾರ್ಧಯುತವಾಗಿ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ ಎಂದು ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.


Share It

You cannot copy content of this page