ಬೆಂಗಳೂರು: ತಮಿಳುನಾಡಿನ ಧರ್ಮಪುರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಕರ್ನಾಟಕ ಮೀಸಲು ಪಡೆಯ ಹಿರಿಯ ಅಧಿಕಾರಿ ಮತ್ತು ಕಾನ್ಸ್ಟೇಬಲ್ಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಧರ್ಮಪುರಿ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಣೆಗೆ ರಾಜ್ಯದ ಮೀಸಲು ಪಡೆಯನ್ನು ಕಳುಹಿಸಿಕೊಡಲಾಗಿತ್ತು. ಗುರುವಾರ ಸಂಜೆ 5.30ರಲ್ಲಿ ತಿರುವಣ್ಣಾಮಲೈನಿಂದ ದಿಂಡಿವಣ್ಣಂ ಕಡೆಗೆ ಜೀಪ್ನಲ್ಲಿ ಐವರು ಅಧಿಕಾರಿ ಮತ್ತು ಸಿಬ್ಬಂದಿ ತೆರಳುತ್ತಿದ್ದರು.
ಕಮಾಂಡೆಂಟ್ ಪ್ರಭಾಕರ್ ಜೀಪ್ನ ಮುಂಭಾಗ ಕುಳಿತಿದ್ದರು. ಹಿಂಭಾಗದಲ್ಲಿ ಕಾನ್ಸ್ಟೇಬಲ್ ವಿಠಲ್, ಡೆಪ್ಯೂಟಿ ಕಮಾಂಡೆಂಟ್ ಹೇಮಂತ್ ಹಾಗೂ ತಮಿಳುನಾಡಿನ ಸಿಬ್ಬಂದಿ, ಕಾನ್ಸ್ಟೇಬಲ್ ಇದ್ದರು.
ಮಾರ್ಗ ಮಧ್ಯೆೆ ಅತಿ ವೇಗವಾಗಿ ಬಂದ ತಮಿಳುನಾಡಿನ ಸಾರಿಗೆ ಬಸ್ ಇವರ ಜೀಪಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಪ್ರಭಾಕರ್, ವಿಠಲ್, ತಮಿಳುನಾಡಿನ ದಿನೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಹಿರಿಯ ಅಧಿಕಾರಿಯೊಬ್ಬರು ಹಾಗೂ ಮತ್ತೊಬ್ಬ ಕಾನ್ಸ್ಟೇಬಲ್ ಗಾಯಗೊಂಡಿದ್ದಾರೆ.
ಕರ್ನಾಟಕ ಮೀಸಲು ಪಡೆಯ ಕೋರಮಂಗಲದ 3ನೇ ಬೆಟಾಲಿಯನ್ನ 3ನೇ ಸಹಾಯಕ ಕಮಾಂಡೆಂಟ್ ಟಿ.ಪ್ರಭಾಕರ್ ಮತ್ತು ವಿಜಯಪುರದ ಐಆರ್ಬಿ (ಇಂಡಿಯನ್ ರಿಸರ್ವ್ ಬೆಟಾಲಿಯನ್) ಕಾನ್ಸ್ಟೇಬಲ್ ವಿಠಲ್ ಗಡಾಧರ್, ಮೃತಪಟ್ಟಿದ್ದಾರೆ. ಘಟನೆಯಲ್ಲಿ ವಿಜಯಪುರದ ಐಆರ್ಬಿ ಡೆಪ್ಯೂಟಿ ಕಮಾಂಡೆಂಟ್ ಯು.ಎನ್.ಹೇಮಂತ್ ಕುಮಾರ್ ಮತ್ತು ಕಾನ್ಸ್ಟೇಬಲ್ ಜಯಕುಮಾರ್ ಗಂಭೀರ ಗಾಯಗೊಂಡಿದ್ದಾರೆ. ಅವರಿಗೆ ಸಮೀಪದ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆೆಗೆ ದಾಖಲಿಸಲಾಗಿದೆ.