ಬೆಂಗಳೂರು : ಹಾಸನದ ಪೆನ್ಡ್ರೈವ್ ಪ್ರಕರಣದಲ್ಲಿ ಪಾರದರ್ಶಕ, ನಿಷ್ಪಪಕ್ಷಪಾತ ತನಿಖೆ ಎಸ್ಐಟಿಯಿಂದ ನಡೆಯುತ್ತಿಲ್ಲ ಎಂದು ಆರೋಪಿಸಿರುವ ಜೆಡಿಎಸ್, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ನಿರ್ಧರಿಸಿದೆ.
ಪೆನ್ಡ್ರೈವ್ ಬಹಿರಂಗಗೊಳಿಸಿದವರ ಮೇಲೆ ಕ್ರಮಕೈಗೊಂಡಿಲ್ಲ. ಮಹಿಳೆಯೊಬ್ಬರ ಅಪಹರಣದ ಆರೋಪದ ಪ್ರಕರಣದಲ್ಲೂ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಈಗಾಗಿ ಎಸ್ಐಟಿ ತನಿಖೆ ಬದಲಾಗಿ ಸಿಬಿಐ ತನಿಖೆ ವಹಿಸಲು ರಾಜ್ಯಪಾಲರಿಗೆ ಜೆಡಿಎಸ್ ಮನವಿ ಮಾಡಿದೆ.
ಪಕ್ಷದ ಕೋರ್ ಕಮಿಟಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು, ಪೆನ್ ಡ್ರೈವ್ ಪ್ರಕರಣದಲ್ಲಿ ಎಸ್ಐಟಿ ತನಿಖೆ ಹಾದಿ ದಾರಿ ತಪ್ಪಿದೆ. ಈ ಬಗ್ಗೆ ರಾಜ್ಯಪಾಲರಿಗೆ ಮನವಿ ಸಲ್ಲಿಸುವುದಾಗಿ ಹೇಳಿದರು. ತಪ್ಪು ಯಾರೇ ಮಾಡಿದರೂ ಶಿಕ್ಷೆ ಕೊಡಬೇಕು ಎಂದು ನಾನು ಆರೋಪ ಕೇಳಿಬಂದ ಮೊದಲ ದಿನವೇ ಹೇಳಿದ್ದೇನೆ. ಆದರೆ, ಈ ವಾತಾವರಣ ನೋಡಿದರೆ ಕಾಂಗ್ರೆಸ್ ನವರಿಗೆ ಶಿಕ್ಷೆ ಕೊಡಿಸುವುದು ಬೇಡ, ಈ ಪೆನ್ ಡ್ರೈವ್ ಪ್ರಕರಣದಿಂದ ನಮಗೆ ಕೇವಲ ಪ್ರಚಾರ ಬೇಕು ಎಂದು ನಿರ್ಧರಿಸಿದಂತಿದೆ ಎಂದು ಆರೋಪಿಸಿದರು.
ಇಷ್ಟು ದಿನಗಳ ತನಿಖೆ ನೋಡಿದರೆ ಏನು ಇವರ ಸಾಧನೆ? ನಾನೇ ನಿರ್ಮಾಪಕ, ನಾನೇ ನಿರ್ದೇಶಕ, ನಾನೇ ಕಥಾನಾಯಕ ಎಂದು ಆರೋಪಿಸಿದ್ದಾರೆ. ಇಂತಹ ಕಥೆಗಳಿಗೆ ಕಥಾನಾಯಕನು ಬೇಕಲ್ಲ, ನನ್ನನ್ನ ಕಥಾನಾಯಕನನ್ನಾಗಿ ಮಾಡಿಕೊಂಡಿದ್ದಾರಲ್ಲ ಡಿಸಿಎಂ ಶಿವಕುಮಾರ್ ಅವರು ಸಂತೋಷ. ನನ್ನನ್ನು ಕಥಾನಾಯಕನನ್ನಾಗಿ ಒಪ್ಪಿಕೊಂಡಿದ್ದಾರೆ ಎಂದು ಛೇಡಿಸಿದರು.