ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಗಾಲ ಶುರುವಾಗಿದೆ ಎಂದು ಹೇಳಬಹುದು. ಏಕೆಂದರೆ ಕಳೆದ ವಾರದ ಅವಧಿಯಲ್ಲಿ ಇದು 4ನೇ ಮಳೆ. ಚಿಕ್ಕಮಗಳೂರು ನಗರ ಮತ್ತು ತಾಲ್ಲೂಕು, ಮೂಡಿಗೆರೆ ಹಾಗೂ ಕಳಸ ತಾಲ್ಲೂಕುಗಳಲ್ಲಿ ಇಂದು ಸಂಜೆ ಧಾರಾಕಾವಾಗಿ ಮಳೆಯಾಗಿದೆ.
ಮಳೆಯ ಜೊತೆ ಬಿರುಗಾಳಿಯ ಹಾಗೆ ಗಾಳಿ ಬೀಸಿದ ಕಾರಣ ಕಳಸ-ಕೊಟ್ಟಿಗೆಹಾರ ರಸ್ತೆಯಲ್ಲಿ ಮರವೊಂದು ಉರುಳಿ ಬಿದ್ದಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ರಸ್ತೆಗೆ ಅಡ್ಡಲಾಗಿ ಬಿದ್ದು ವಾಹನಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡಿದ್ದ ಮರವನ್ನು ಸ್ಥಳೀಯರೇ ತೆರವುಗೊಳಿಸಿದರು.
ಮುಂದಿನ ಒಂದು ವಾರ ಕಾಲ ರಾಜ್ಯದ ನಾನಾ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದು ವಾರದಿಂದ ಮಳೆಯಾಗುತ್ತಿದೆ ಮತ್ತು ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಈ ವಾರವೆಲ್ಲಾ ಮಳೆಯಾಗಲಿದೆ.
ಅದೇನೇ ಇರಲಿ, ಬದಲಾದ ವಾತಾವರಣ ಮತ್ತು ಹವಾಮಾನದಿಂದ ಚಿಕ್ಕಮಗಳೂರು ಜಿಲ್ಲೆಯ ಜನ ಈ ಮಳೆಯಿಂದ ಖುಷಿಪಡುತ್ತಿದ್ದಾರೆ.