ರಾಜಕೀಯ ಸುದ್ದಿ

ನಿಮ್ಮ ಸರಕಾರದ ಅವಧಿಯ ಸಾರಿಗೆ ನೌಕರರ ಪಡಿಪಾಟಲು ನಿಮ್ಮ ತಂದೆ ಅವ್ರನ್ನ ಕೇಳಿ ತಿಳಿಯಿರಿ: ವಿಜಯೇಂದ್ರಗೆ ಸಚಿವ ರಾಮಲಿಂಗಾ ರೆಡ್ಡಿ ಟಾಂಗ್

Share It

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಕುರಿತು ಟ್ವೀಟ್ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಟಾಂಗ್ ನೀಡಿದ್ದಾರೆ.

ವಿಜಯೇಂದ್ರ ಅವರೇ, ತುಂಬಾ ತಡವಾಗಿ ಎಚ್ಚೆತ್ತು ಕೊಂಡಿದ್ದೀರಾ. ತಮ್ಮ ಪಕ್ಷದ ಅವಧಿಯಲ್ಲಿ ಸಾರಿಗೆ ನೌಕರರ ಪಡಿಪಾಟಲು ಹೇಳತೀರದ್ದಾಗಿತ್ತು ಎಂಬುದು ಗೊತ್ತಿಲ್ಲದಿದ್ದರೆ ತಮ್ಮ‌ ಪೂಜ್ಯ ತಂದೆಯವರನ್ನು, ಮಾಜಿ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಅವರನ್ನು ಸ್ವಲ್ಪ ಕೇಳಿ, ಮಾಹಿತಿ ಪಡೆದುಕೊಂಡು ನಂತರ ಟ್ಟೀಟ್ ಮಾಡಿ ಎಂದು ಸಲಹೆ ನೀಡಿದ್ದಾರೆ.

ಟ್ವೀಟ್ ಮಾಡುವುದರಲ್ಲಿಯು ತಪ್ಪೇ ತಪ್ಪು, 38 ತಿಂಗಳ‌ ವೇತನ ಬಾಕಿ ಅಲ್ಲ ರೀ, 38 ತಿಂಗಳ‌ ವೇತನ ಪರಿಷ್ಕರಣೆ ಬಾಕಿ. ಇವೆರಡರ ವ್ಯತ್ಯಾಸವೂ ತಿಳಿಯದವರಿಂದ ನೈತಿಕತೆಯ ಪಾಠವೇ?  ಅದಕ್ಕೆ‌ ಉತ್ತರ ಇಲ್ಲಿದೆ ನೋಡಿ ಎಂದಿದ್ದಾರೆ.

·ನಿಮ್ಮ ಹಿಂದಿನ ಸರ್ಕಾರ ಹೊರತುಪಡಿಸಿ, ಹಿಂದಿನ ಎಲ್ಲಾ ಸರ್ಕಾರಿ ಆದೇಶಗಳಲ್ಲಿಯೂ 2012-2016 ರವರೆಗೆ ವೇತನ ಹೆಚ್ಚಳ ಮಾಡಿದಾಗ 2012 ರಿಂದ ಜಾರಿಗೆ ಬರುವುದಾಗಿ, 2016-2020 ರವರೆಗೆ ವೇತನ ಹೆಚ್ಚಳ ಮಾಡಿದಾಗ 2016 ರಿಂದ ಜಾರಿಗೆ ಬರುವಂತೆ ಎಂದೇ ಸರ್ಕಾರದ ಆದೇಶದಲ್ಲಿ ನಮೂದಾಗಿರುತ್ತದೆ. ಆದರೆ 2023 ರ ಆದೇಶದಲ್ಲಿ  *ಸರ್ಕಾರದ ಆದೇಶ ಸಂಖ್ಯೆ: ಟಿಡಿ 12 ಟಿಸಿಬಿ 2023, ಬೆಂಗಳೂರು, ದಿನಾಂಕ 17-03-2023 ರಲ್ಲಿ ರಸ್ತೆ ಸಾರಿಗೆ ನಿಗಮಗಳ ಅಧಿನಿಯಮ 1950 ರ ಸೆಕ್ಷನ್ 34(1l ರನ್ವಯ ದಿನಾಂಕ: 1.03.2023 ರಿಂದ ಜಾರಿಗೆ ಬರುವಂತೆ* ಎಂದು ನಮೂದಾಗಿದ್ದು, 2020 ರಿಂದ ಜಾರಿಗೆ ಬರುವಂತೆ ಎಂದು ಸ್ವಷ್ಟವಾಗಿ ಆದೇಶದಲ್ಲಿ ತಿಳಿಸಿಲ್ಲದಿರುವುದೇ ಈ‌ ಎಲ್ಲಾ ಗೊಂದಲಗಳಿಗೆ ಕಾರಣವಾಗಿದೆ.  ನಿಮ್ಮ ಸರ್ಕಾರವೇ ಸಾರಿಗೆ ನೌಕರರನ್ನು ಈ ಅತಂತ್ರ ಪರಿಸ್ಥಿತಿಗೆ ತಳ್ಳಿರುವುದು. ನೀವೇ ಇದಕ್ಕೆಲ್ಲ ಕಾರಣಕರ್ತರು ಎಂದಿದ್ದಾರೆ.

·ನಿಮ್ಮ ಪಕ್ಷದ ಅಧಿಕಾರವಾಧಿಯಲ್ಲಿ ಸಂಪೂರ್ಣ ಸ್ಥಗಿತಗೊಂಡಿದ್ದ ನೇಮಕಾತಿಗೆ‌ ನಾವು ಚಾಲನೆ ನೀಡಿದ್ದೇವೆ, 10000 ಹೊಸ‌ ನೇಮಕಾತಿ, ಇದರಲ್ಲಿ 8 ವರ್ಷಗಳಿಂದ ಅನುಕಂಪದ ಆಧಾರದ ನೌಕರಿ ನೀಡದಿರುವ 1000 ಮೃತ ಅವಲಂಬಿತರು ಇದ್ದಾರೆ. ಹೊಸ ಬಸ್ಸುಗಳ ಸೇರ್ಪಡೆ ಗಗನ ಕುಸುಮವಾಗಿದ್ದ ನಿಮ್ಮ ಅವಧಿಯಲ್ಲಿ, ನಾವು 5200 ಹೊಸ ಬಸ್ಸುಗಳನ್ನು ಸೇರ್ಪಡೆ ಮಾಡಿದ್ದೇವೆ ಎಂದಿದ್ದಾರೆ.

·  ತಮ್ಮ ಕಾಲದ ನೌಕರರ ಭವಿಷ್ಯ ನಿಧಿ ಮತ್ತು ಡೀಸೆಲ್‌ ಮೊತ್ತ ಪಾವತಿ ಬಾಕಿ ಪಾವತಿಗಾಗಿ ರೂ.2000 ಕೋಟಿ ಹಣವನ್ನು ಬ್ಯಾಂಕ್ ಗಳಿಂದ ಸಾಲ‌ ಪಡೆಯಲು ಅವಕಾಶ ಕಲ್ಪಿಸಿ, ಅದರ ಅಸಲು ಮತ್ತು ಬಡ್ಡಿಯನ್ನು  ನಮ್ಮ ಸರ್ಕಾರ ಮರುಪಾವತಿ ಮಾಡುತ್ತಿದೆ. ಶಕ್ತಿ ಯೋಜನೆಯಿಂದ ನಿಗಮಗಳಿಗೆ ನಿಜಕ್ಕೂ ಆದಾಯ ಹೆಚ್ಚಳವಾಗಿದೆ, 65% ಪ್ರಯಾಣಿಕರು ಶಕ್ತಿ ಯೋಜನೆಯಡಿಯಲ್ಲಿ ಪ್ರಯಾಣಿಸುತ್ತಿದ್ದು, ಸಾರಿಗೆ ನಿಗಮಗಳನ್ನು ಸದೃಢಗೊಳಿಸಲು ನೆರವಾಗಿದೆ ಎಂದು ತಿಳಿಸಿದ್ದಾರೆ.

·ನಿಮ್ಮ ಬಿ.ಜೆ.ಪಿ‌ ಅಧಿಕಾರದ ಅವಧಿಯಲ್ಲಿ ಸಾರಿಗೆ ನೌಕರರಿಗೆ ಅರ್ಧ ಸಂಬಳ, ಈ ತಿಂಗಳ ಸಂಬಳ ಮುಂದಿನ ತಿಂಗಳು ನೀಡುತ್ತಿದ್ದನ್ನು ಮರೆತು ಬಿಟ್ಟಿರಾ?

ನಿಮ್ಮ ಅವಧಿಯಲ್ಲಿಯೇ 15 ದಿನಗಳ ಮುಷ್ಕರ ನಡೆದಿದ್ದು, ಇತಿಹಾಸ, ಕಳೆದ ಮುಷ್ಕರದ ಸಮಯದಲ್ಲಿ ಸಾವಿರಾರು ನೌಕರರನ್ನು ಸೇವೆಯಿಂದ ವಜಾಗೊಳಿಸಿರುವುದು, ವರ್ಗಾವಣೆ ಮಾಡಿರುವುದು, ನೌಕರರ‌ ಮೇಲೆ ಪೊಲೀಸ್‌ ಕೇಸ್‌ ಗಳನ್ನು ದಾಖಲಿಸಿರುವುದು ನಿಮ್ಮ ಹೆಗ್ಗಳಿಕೆ ಎಂದು ವ್ಯಂಗ್ಯ ವಾಡಿದ್ದಾರೆ.


Share It

You cannot copy content of this page