ಬೆಂಗಳೂರು: ಬಹುನಿರೀಕ್ಷಿತ ಬೆಂಗಳೂರು ಮಹಾನಗರದ ಗ್ರೇಟರ್ ಬೆಂಗಳೂರು ಪಾಲಿಕೆ ಚುನಾವಣೆಗೆ ಇಂದು ಮುಹೂರ್ತ ಫಿಕ್ಸ್ ಆಗಲಿದ್ದು, ಮಧ್ಯಾಹ್ನದ ವೇಳೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಲಿದೆ.
ಚುನಾವಣೆಗೆ ದಿನಾಂಕ ನಿಗದಿ ಮಾಡುವ ಸಂಬಂಧ ಎಲ್ಲ ಪಾಲಿಕೆಗಳ ಹಿರಿಯ ಅಧಿಕಾರಿಗಳ ಸಭೆಯನ್ನು ಚುನಾವಣಾ ಆಯೋಗ ಕರೆದಿದೆ. ಈ ನಡುವೆ ಮೂಲಗಳ ಪ್ರಕಾರ ಈ ಸಭೆ ನಡೆಯುವುದು ಅನುಮಾ ಎನ್ನಲಾಗಿದ್ದು, ಯಾವುದೇ ಸಭೆ ನಡೆಸದೆ, ದಿನಾಂಕ ಘೋಷಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಸಭೆ ಕರೆದು ಎಲ್ಲ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಅನಂತರ ಒಂದು ತೀರ್ಮಾನಕ್ಕೆ ಬರಲು ಆಯೋಗ ತೀರ್ಮಾನಿಸಿತ್ತು.ಆದರೆ, ಸರಕಾರ ನೇರವಾಗಿ ಚುನಾವಣೆ ಘೋಷಣೆ ಮಾಡುವಂತೆ ಸಲಹೆ ನೀಡಿದೆ ಎನ್ನಲಾಗಿದೆ. ಸರಕಾರವೇ ಚುನಾವಣೆ ನಡೆಸಲು ಆಸಕ್ತಿ ತೋರಿದ ಹಿನ್ನಲೆಯಲ್ಲಿ ದಿನಾಂಕ ಘೋಷಣೆಗೆ ತೀರ್ಮಾನಿಸಲಾಗಿದೆ.
ರಾಜ್ಯದಲ್ಲಿ ನಡೆದ ಎರಡು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವುದು ಸರಕಾರದ ಆತ್ಮವಿಶ್ವಾಸ ಹೆಚ್ಚಿಸಿದೆ. ಕಾಂಗ್ರೆಸ್ ಅಸ್ತಿತ್ವದಲ್ಲಿರುವ ಕೇರಳದಲ್ಲಿಯೂ ಅಧಿಕಾರಕ್ಕೆ ಬಂದಿದೆ. ತನಿಳುನಾಡಿನಲ್ಲಿಯೂ ಕೂಡ ಅಧಿಕಾರದ ಚುಕ್ಕಾಣಿ ಹಿಡಯುವ ಟಿವಿಕೆ ಜತೆಗೆ ಮೈತ್ರಿ ಮಾಡಿಕೊಂಡಿದೆ.
ಇದು ಕಾಂಗ್ರೆಸ್ ಸರಕಾರದ ವಿಶ್ವಾಸ ಹೆಚ್ಚಿಸಿದ್ದು, ಈ ಸಂದರ್ಭದಲ್ಲಿ ಜಿಬಿಎ ಚುನಾವಣೆ ನಡೆದರೆ, ಅಧಿಕಾರಕ್ಕೆ ಬರುವುದು ಸುಲಭ ಹಾಗೂ ಸುಪ್ರೀಂ ಕೋರ್ಟ್ ನ ಆದೇಶದಂತೆ ಜೂನ್ 30 ರೊಳಗೆ ಚುನಾವಣೆ ನಡೆಸಿದಂತೆಯೂ ಆಗುತ್ತದೆ ಎಂಬ ತೀರ್ಮಾನಕ್ಕೆ ಸರಕಾರ ಬಂದಿದೆ ಎನ್ನಲಾಗಿದೆ.

