ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಮತ್ತು ಪವಿತ್ರಾಗೌಡ ಅವರ ಜಾಮೀನು ಅರ್ಜಿ ವಿಚಾರಣೆ ಇಂದು (ಸೆ. 30) ನಡೆಯಲಿದೆ.
ನಟ ದರ್ಶನ್ ಪರ ವಕೀಲರು ಸೆ. 21ರಂದು ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋಟ್೯ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಅಂದು ವಿಚಾರಣೆ ನಡೆಸಿ ಕೋರ್ಟ್ ಸೆ.27ಕ್ಕೆ ಮುಂದೂಡಿತ್ತು. ಆರೋಪಿಗಳಿಗೆ ಜಾಮೀನು ನೀಡದಂತೆ ಎಸ್ಪಿಪಿ ಪ್ರಸನ್ನಕುಮಾರ್ ತಕರಾರು ಅರ್ಜಿ ಸಲ್ಲಿಸಿದ ನಂತರ ವಿಚಾರಣೆ ಆರಂಭವಾಗಿತ್ತು.
ನಮ್ಮ ಕಕ್ಷಿದಾರರ ಪರ ಹಿರಿಯ ವಕೀಲರು ಲಭ್ಯರಿಲ್ಲ. ಈ ಕಾರಣಕ್ಕೆ ಅರ್ಜಿ ವಿಚಾರಣೆ ಮುಂದೂಡಬೇಕು ಎಂದು ದರ್ಶನ್ ಪರ ಕಿರಿಯ ವಕೀಲ ಸುನೀಲ್ ಮನವಿ ಮಾಡಿದ್ದರು.
ಆಕ್ಷೇಪಣೆ ಸಲ್ಲಿಸಿಲ್ಲವೆಂದು ದರ್ಶನ್ ಪರ ವಕೀಲರು ಈ ಹಿಂದೆ ತಕರಾರು ತೆಗೆದಿದ್ದರು. ಈಗ ಆಕ್ಷೇಪಣೆ ಸಲ್ಲಿಸಿದ್ದೇವೆ. ವಾದ ಮಂಡನೆಗೂ ಸಿದ್ಧರಿದ್ದೇವೆ. ದಯವಿಟ್ಟು ವಾದ ಮಂಡನೆಗೆ ಅವಕಾಶ ಮಾಡಿಕೊಡಬೇಕು ಎಂದು ಪ್ರಸನ್ನಕುಮಾರ್ ಕೋರಿದರು.
ಆದರೆ, ದರ್ಶನ್ ಪರ ವಕೀಲರು ವಾದ ಮಂಡನೆಗೆ ಸಮಯ ಕೇಳಿದ್ದರಿಂದ ನ್ಯಾಯಾಧೀಶರು ಸೆ.30ಕ್ಕೆ ವಿಚಾರಣೆ ಮುಂದೂಡಿದ್ದರು.