ಬೆಂಗಳೂರು: KSRTC ಸೇರಿ ಸಾರಿಗೆ ನಿಗಮಗಳ ಕಾರ್ಯವೈಖರಿ ಅಧ್ಯಯನಕ್ಕೆ ಆಂಧ್ರಪ್ರದೇಶದ ನಿಯೋಗ ಭೇಟಿ ನೀಡಿದ್ದು, ಸಂಸ್ಥೆ ನಿರ್ವಹಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದೆ.
ಆಂಧ್ರಪ್ರದೇಶ ಸರ್ಕಾರದ ಸಾರಿಗೆ ಹಾಗೂ ಯುವಜನ ಕ್ರೀಡಾ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ, ಗೃಹ ಹಾಗೂ ವಿಪತ್ತು ನಿತ್ವಹಣೆ ಸಚಿವೆ ಅನಿತಾ ವಂಗಲಪುಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಗುಮ್ಮಿಡಿ ಸಂಧ್ಯಾರಾಣಿ, ಪ್ರಧಾನ ಕಾರ್ಯದರ್ಶಿಗಳು, ಸಾರಿಗೆ, ರಸ್ತೆ ಮತ್ತು ಕಟ್ಟಡ, ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ ಹಾಗೂ ಆಂಧ್ರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ನಿಯೋಗದಲ್ಲಿದ್ದರು.
ಈ ನಿಯೋಗವು ಕರಾರಸಾ ನಿಗಮದ, ಕೇಂದ್ರ ಕಚೇರಿಗೆ ಭೇಟಿ ನೀಡಿ, ನಿಗಮದಲ್ಲಿ ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕೈಗೊಂಡಿರುವ ಕ್ರಮಗಳ ಕುರಿತು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಿದರು.

ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-2ಕ್ಕೆ ಭೇಟಿ ನೀಡಿದ ತಂಡವು ಐರಾವತ ಕ್ಲಬ್ ಕಾಸ್ 2.0, ಐರಾವತ ಕ್ಲಬ್ ಕಾಸ್, ಅಂಬಾರಿ ಡ್ರೀಮ್ ಕ್ಲಾಸ್, ಪಲ್ಲಕ್ಕಿ, ಅಂಬಾರಿ ಉತ್ಸವ, ಫ್ಲೈ ಬಸ್, ನಗರ ಸಾರಿಗೆ, ರಾಜಹಂಸ ಹಾಗೂ ಅಶ್ವಮೇಧ ವಾಹನಗಳನ್ನು ವೀಕ್ಷಿಸಿದರು. ಘಟಕಗಳ ನಿರ್ವಹಣೆ, ವಾಹನಗಳಿಗೆ ನೀಡಿರುವ ಬ್ರಾಂಡಿಗ್ ಹಾಗೂ ವಾಹನಗಳ ಪುನಶ್ಚೇತನ ಕಾರ್ಯದ ಕುರಿತು ಮುಕ್ತಕಂಠದಿಂದ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಶಾಂತಿನಗರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಕುರಿತು ಮಹಿಳಾ ಪ್ರಯಾಣಿಕರಿಂದ ಅನುಭವ ಪಡೆದುಕೊಂಡರು.

ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕರು ಬೆಂ.ಮ.ಸಾ. ಸಂಸ್ಥೆ, ಹಾಗೂ ಮಾನ್ಯ ನಿರ್ದೇಶಕರು (ಸಿ ಮತ್ತು ಜಾ) ಹಾಗೂ ಎ.ಪಿ.ಎಸ್.ಆರ್.ಟಿ.ಸಿ. ಹಾಗೂ ಕರಾರಸಾ ನಿಗಮದ ಅಧಿಕಾರಿಗಳು ಉಪಸ್ಥಿತಿರಿದ್ದರು.