ನವದೆಹಲಿ: ಭಾರತೀಯ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡುತ್ತದೆ. ಇದಕ್ಕಾಗಿ ಸಂವಿಧಾನವನ್ನೇ ತೆಗೆದುಹಾಕಲು ಬಿಜೆಪಿ ಹವಣಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಸಂವಿಧಾನ ನಿರ್ಮೂಲನೆ ಮಾಡಲು ಬಿಜೆಪಿ ಪೂರ್ಣ ಪ್ರಮಾಣದ ದಾಳಿ ಪ್ರಾರಂಭಿಸಿದೆ. ತನ್ನ ರಾಜಕೀಯ ಶಕ್ತಿ ವಿಸ್ತರಣೆ ಮಾಡಿಕೊಳ್ಳಲು ಸಂವಿಧಾನವನ್ನೇ ಒಂದು ಸಾಧನವಾಗಿ ಬಳಸಲು ಮುಂದಾಗಿದೆ. ಅದರ ಮೂಲಕ ದೇಶದ ಸಾಂಸ್ಥಿಕ ಚೌಕಟ್ಟುಗಳನ್ನೇ ವಶಪಡಿಸಿಕೊಂಡಿದೆ. ಇದರ ವಿರುದ್ಧ ಪ್ರತಿಪಕ್ಷಗಳು ಹೋರಾಟ ಮಾಡುತ್ತಿವೆ ಎಂದು ಹೇಳಿದ್ದಾರೆ.
ಸೋಮವಾರ ಕಾಂಗ್ರೆಸ್ ಬಿಡುಗಡೆ ಮಾಡಿದ ಒಂದು ಗಂಟೆಯ ವಿಡಿಯೋದಲ್ಲಿ ಭಾರತದ ಅತಿದೊಡ್ಡ ಮತ್ತು ಸಂಕೀರ್ಣ ಪ್ರಜಾಪ್ರಭುತ್ವವು ಜಾಗತಿಕ ಆಸ್ತಿಯಾಗಿದೆ. ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲಿನ ದಾಳಿ ಜಾಗತಿಕ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲಿನ ದಾಳಿಯಾಗಿದೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.
ಬಿಜೆಪಿ ಮೂಲಭೂತವಾಗಿ ಪ್ರಸ್ತಾಪಿಸುತ್ತಿರುವುದು ಸಂವಿಧಾನದ ನಿರ್ಮೂಲನೆಯನ್ನು. ರಾಜ್ಯಗಳ ನಡುವಿನ ಸಮಾನತೆಯ ಕಲ್ಪನೆಯನ್ನು ಅಳಿಸಿ ಹಾಕುವುದು, ಭಾಷೆಗಳು ಮತ್ತು ಧರ್ಮಗಳ ನಡುವಿನ ಸಮಾನತೆಯ ಕಲ್ಪನೆ ಇಲ್ಲವಾಗಿಸುವುದು, ಪ್ರತಿಯೊಬ್ಬ ವ್ಯಕ್ತಿಗೂ ಒಂದೇ ಮೌಲ್ಯವಿರುತ್ತದೆ ಎಂಬ ಸಂವಿಧಾನದ ಕೇಂದ್ರ ತಿರುಳನ್ನೇ ತೆಗೆದುಹಾಕುವುದಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಹರ್ಟೀ ಶಾಲೆಯ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

