ಟಿವಿ ಲೋಕದಲ್ಲಿ ಪರಿಚಿತ ಮುಖವಾಗಿರುವ ಬಿಗ್ ಬಾಸ್ ಮಾಜಿ ಸ್ಪರ್ಧಿಯೊಬ್ಬರನ್ನು ವಿಮಾನ ನಿಲ್ದಾಣದಲ್ಲೇ ಪೊಲೀಸರು ಬಂಧಿಸಿರುವ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿಮಾನ ಲ್ಯಾಂಡ್ ಆಗಿ ಹೊರಬರುತ್ತಿದ್ದ ಕ್ಷಣದಲ್ಲೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಈ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ.
ಮರಾಠಿ ಬಿಗ್ ಬಾಸ್ ಸೀಸನ್ 3ರಲ್ಲಿ ಸ್ಪರ್ಧಿಯಾಗಿ ಹೆಸರು ಗಳಿಸಿದ್ದ ನಟ ಜಯ್ ದುಧಾನೆಯನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ಬಂಧನ ಟಿವಿ ವಲಯದಲ್ಲಿ ಸಂಚಲನ ಉಂಟುಮಾಡಿದೆ. ಜನಪ್ರಿಯ ರಿಯಾಲಿಟಿ ಶೋ ಮೂಲಕ ಖ್ಯಾತಿ ಗಳಿಸಿದ್ದ ಜಯ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.
ಮುಂಬೈ ಏರ್ಪೋರ್ಟ್ನಲ್ಲಿ ಬಂಧನ
ಜಯ್ ದುಧಾನೆ ಮುಂಬೈಗೆ ಆಗಮಿಸುವ ಮಾಹಿತಿ ಲಭಿಸಿದ ಬಳಿಕ ಪೊಲೀಸರು ವಿಮಾನ ನಿಲ್ದಾಣದಲ್ಲೇ ಕಾಯುತ್ತಿದ್ದರು. ಅವರು ನಿಲ್ದಾಣದಿಂದ ಹೊರಬರುತ್ತಿದ್ದಂತೆ ಬಂಧಿಸಲಾಗಿದೆ. ಈ ವಿಷಯವನ್ನು ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ್ ಮಾನೆ ಅಧಿಕೃತವಾಗಿ ದೃಢಪಡಿಸಿದ್ದಾರೆ.
ಬಂಧನಕ್ಕೆ ಕಾರಣವೇನು?
ಜಯ್ ದುಧಾನೆ ಹಾಗೂ ಅವರ ಕುಟುಂಬದ ವಿರುದ್ಧ 4.61 ಕೋಟಿ ರೂಪಾಯಿ ವಂಚನೆ ಪ್ರಕರಣ ದಾಖಲಾಗಿದೆ. ನಿವೃತ್ತ ಎಂಜಿನೀಯರ್ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ದೊಡ್ಡ ಮೊತ್ತದ ಹಣವನ್ನು ವಂಚಿಸಿದ್ದಾರೆ ಎಂಬ ಆರೋಪ ಇದೆ.
ಸಾಲ ಇರುವ ಆಸ್ತಿಯ ಮಾರಾಟ ಆರೋಪ
ಜಯ್ ದುಧಾನೆಯ ಮಾತುಗಳನ್ನು ನಂಬಿ ನಿವೃತ್ತ ಎಂಜಿನೀಯರ್ ನಾಲ್ಕು ವಾಣಿಜ್ಯ ಅಂಗಡಿಗಳನ್ನು ಖರೀದಿಸಿದ್ದರು. ಇದಕ್ಕಾಗಿ 4.61 ಕೋಟಿ ರೂಪಾಯಿ ಪಾವತಿಸಿದ್ದರು. ಆದರೆ ಆ ಆಸ್ತಿಗಳ ಮೇಲೆ ಈಗಾಗಲೇ ಬ್ಯಾಂಕ್ ಸಾಲ ಇದ್ದ ವಿಷಯ ನಂತರ ಬಹಿರಂಗವಾಗಿದೆ. ಇದರಿಂದ ಅಸಮಾಧಾನಗೊಂಡ ಎಂಜಿನೀಯರ್ ಪೊಲೀಸ್ ದೂರು ದಾಖಲಿಸಿದ್ದಾರೆ.
ನಕಲಿ ದಾಖಲೆಗಳ ಆರೋಪ
ವಾಣಿಜ್ಯ ಅಂಗಡಿಗಳ ಮಾರಾಟಕ್ಕಾಗಿ ಜಯ್ ದುಧಾನೆ ನಕಲಿ ದಾಖಲೆಗಳನ್ನು ಸಿದ್ಧಪಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬ್ಯಾಂಕ್ ಕ್ಲಿಯರೆನ್ಸ್ ಪತ್ರಗಳು ಹಾಗೂ ಯಾವುದೇ ಸಾಲವಿಲ್ಲ ಎಂಬ ದಾಖಲೆಗಳು ಸುಳ್ಳು ಎನ್ನಲಾಗಿದೆ. ನಂತರ ಬ್ಯಾಂಕ್ನಿಂದ ಸಾಲ ಮರುಪಾವತಿ ಮಾಡಿಲ್ಲ ಎಂಬ ಜಪ್ತಿ ನೋಟಿಸ್ ಬಂದಾಗಲೇ ವಂಚನೆ ಬೆಳಕಿಗೆ ಬಂದಿದೆ ಎಂದು ದೂರುದಾರರು ತಿಳಿಸಿದ್ದಾರೆ.
ನಟ ಮತ್ತು ಉದ್ಯಮಿಯಾಗಿ ಪರಿಚಿತ ಜಯ್ ದುಧಾನೆ
ಜಯ್ ದುಧಾನೆ ನಟನಾಗಿ ಹಾಗೂ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಮರಾಠಿ ಬಿಗ್ ಬಾಸ್ ಸೀಸನ್ 3ರಲ್ಲಿ ರನ್ನರ್ಅಪ್ ಸ್ಥಾನ ಪಡೆದಿದ್ದರು. ಇತ್ತೀಚೆಗೆ, ಡಿಸೆಂಬರ್ 24ರಂದು ತಮ್ಮ ಬಹುಕಾಲದ ಗೆಳತಿ ಹರ್ಷಲ್ ಪಾಟೀಲ್ ಜೊತೆ ವಿವಾಹವಾಗಿದ್ದರು. ಇದೀಗ ಅವರ ಬಂಧನದಿಂದ ವೈಯಕ್ತಿಕ ಹಾಗೂ ವೃತ್ತಿಜೀವನ ಎರಡೂ ದೊಡ್ಡ ಚರ್ಚೆಗೆ ಕಾರಣವಾಗಿದೆ.

