ಕುಶಾಲನಗರ : ರೈತರ ಜಮೀನಿಗೆ ಅಳವಡಿಸಿಕೊಂಡಿದ್ದ ತಂತಿ ಬೇಲಿಯನ್ನು ತುಳಿದು ಕಾಡಿನಿಂದ ಬಂದಿದ್ದ ಹೆಣ್ಣಾನೆಯೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಡಿಕೇರಿ ಜಿಲ್ಲೆಯ ಕುಶಾಲನಗರ ತಾಲೂಕಿನ ಬೈಲುಕುಪ್ಪೆ ಬಳಿ ಘಟನೆ ನಡೆದಿದ್ದು, ಈ ಪ್ರದೇಶ ದೊಡ್ಡಹರವೆ ಮೀಸಲು ಅರಣ್ಯ ಪ್ರದೇಶದಲ್ಲಿದೆ. ಈ ಭಾಗದಲ್ಲಿ ರೈತರೊಬ್ಬರು ಅಳವಡಿಸಿದ್ದ ಬೇಲಿಯ ವಿದ್ಯುತ್ ತಗುಲಿ ಆನೆ ಮೃತಪಟ್ಟಿದೆ.
ಜಮೀನಿಗೆ ಹಾಕಿದ್ದ ತಂತಿ ಬೇಲಿಯಲ್ಲಿ ಜಿಐ ವೈರ್ ಗೆ ವಿದ್ಯುತ್ ಸಂಪರ್ಕ ನೀಡಿದ್ದರು ಎನ್ನಲಾಗಿದೆ. ಕಾಡಿನಿಂದ ಆಹಾರ ಹರಸಿಕೊಂಡು ಬಂದ ಆನೆ ವಿದ್ಯುತ್ ತಂತಿ ತುಳಿದಿದೆ. ಇದರಿಂದಾಗಿ ಆನೆ ಮೃತಪಟ್ಟಿದೆ ಎನ್ನಲಾಗಿದೆ.
ರೈತ ಬೇಲಿಗೆ ವಿದ್ಯುತ್ ಸಂಪರ್ಕ ಕೊಟ್ಟಿದ್ದಲ್ಲದೆ, ಆತ ಅಕ್ರಮವಾಗಿಯೇ ವಿದ್ಯುತ್ ಸಂಪರ್ಕ ಮಾಡಿಕೊಂಡಿದ್ದ ಎಂಬ ಆರೋಪವಿದೆ. ಘಟನೆ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿದ್ದು, ಮಾಲೀಕರ ವಿರುದ್ಧ ಬೈಲುಕುಪ್ಪೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

