ಕಾನ್ಪುರ : ಉತ್ತರ ಪ್ರದೇಶದ ಲಕ್ನೋದ ತಂಬಾಕು ಉದ್ಯಮಿಯ ಪುತ್ರನ ಶೋಕಿಗೆ ಆರು ಜನ ಪಾದಚಾರಿಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಕಾನ್ಫುರದಲ್ಲಿ ನಡೆದಿದೆ.
ತಂಬಾಕು ಉದ್ಯಮಿ ಕೆ.ಕೆ.ಮಿಶ್ರಾ ಪುತ್ರ ಶಿವಂ ಮಿಶ್ರಾ ಬಳಸುತ್ತಿದ್ದ 10 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕಾರನ್ನು ಆತ ಕುಡಿದ ಮತ್ತಿನಲ್ಲಿ ಏಕಾಏಕಿ ಚಲಾಯಿಸಿದ್ದು, ಇದರಿಂದ ಅನೇಕ ವಾಹನಗಳು ಜಖಂಗೊಂಡಿದ್ದು ಆರು ಜನ ಪಾದಚಾರಿಗಳಿಗೆ ಗಾಯಗಳಾಗಿವೆ.
ಭಾನುವಾರ ಮಧ್ಯಾಹ್ನ ನಡೆದ ಘಟನೆಯಲ್ಲಿ ಶಿವಂ ಮಿಶ್ರಾ ವಿಪರೀತ ಪಾನಮತ್ತನಾಗಿ ಕಾರು ಚಲಾಯಿಸಿದ್ದ. ಈ ಐಷರಾಮಿ ಕಾರು ಗುದ್ದಿ, ಒಂದು ಬುಲೆಟ್, ಆಟೋ ಸೇರಿದಂತೆ ಅನೇಕ ವಾಹನಗಳು ಜಖಂಗೊಂಡಿದ್ದವು. ಇದೇ ವೇಳೆ ಆರು ಜನ ಪಾದಚಾರಿಗಳ ಮೇಲೆ ಕಾರು ಹರಿದು ಅವರೆಲ್ಲರೂ ಗಾಯಗೊಂಡಿದ್ದಾರೆ.
ಕಾನ್ಪುರ ಪೊಲೀಸರು ಶಿವಂ ಮಿಶ್ರಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಕುಡಿದ ಮತ್ತಿನಲ್ಲಿದ್ದ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮುಂದಿನ ವಿಚಾರಣೆ ನಡೆಸುತ್ತಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

