ಅಪರಾಧ ರಾಜಕೀಯ ಸುದ್ದಿ

ಗೌರವದಿಂದ ಕಸ ವಿಲೇವಾರಿ ಮಾಡಲು ಬಿಡಿ. ಇಲ್ಲದಿದ್ದರೆ ಎಸ್ಮಾ ಕಾಯ್ದೆಯಡಿ ಕಾನೂನು ಕ್ರಮ

Share It

ಬೆಂಗಳೂರು: ”ಗೌರವದಿಂದ ಕಸ ವಿಲೇವಾರಿ ಮಾಡಲು ಬಿಡಿ. ಇಲ್ಲದಿದ್ದರೆ ಎಸ್ಮಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳುತ್ತೇನೆ” ಎಂದು ಶಾಸಕರ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.

”ಅಸಮರ್ಪಕ ಕಸ ವಿಲೇವಾರಿ ವಿರೋಧಿಸಿದ ನಗರದ ಮಿಟಗಾನಹಳ್ಳಿ, ಬೆಳ್ಳಳ್ಳಿ ಹಾಗೂ ದೊಡ್ಡಬಳ್ಳಾಪುರದಲ್ಲಿ ಕಸದ ವಾಹನಗಳನ್ನು ತಡೆಯಲಾಗಿದೆ. ಕಸದ ವಿಚಾರವಾಗಿ ಶಾಸಕರು ಬ್ಲ್ಯಾಕ್​ಮೇಲ್ ಮಾಡುತ್ತಿದ್ಧಾರೆ. ನಿನ್ನೆ ಅರವಿಂದ ಲಿಂಬಾವಳಿ ಮಾಡಿದ್ದರು. ಮತ್ತೊಬ್ಬ ಶಾಸಕ ಧೀರಜ್ ಮುನಿರಾಜ್ ಕಸದ ಲಾರಿ ತಡೆಗಟ್ಟಿದ್ದಾರೆ. ಗೌರವದಿಂದ ಕಸ ವಿಲೇವಾರಿಗೆ ಅವಕಾಶ ಮಾಡಿಕೊಡಿ. ಇಲ್ಲದಿದ್ದರೆ ಎಸ್ಮಾ ಪ್ರಕರಣ ದಾಖಲಿಸುತ್ತೇನೆ” ಎಂದು ಎಚ್ಚರಿಸಿದರು.

ಶಾಸಕರ ಕ್ಷೇತ್ರಗಳಿಗೆ ಅನುದಾನಕ್ಕಾಗಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾರೆ. ಹೀಗೆ ಮಾಡಿದರೆ ಆರ್.ಅಶೋಕ್, ವಿಜಯೇಂದ್ರ ಅಥವಾ ಬಿಜೆಪಿ ಕಚೇರಿ ಮುಂದೆ ಕಸ ಹಾಕಿಸಬೇಕಾ? ಕಸವನ್ನು ಎಲ್ಲಾದರೂ ಒಂದು ಕಡೆ ಹಾಕಬೇಕಲ್ಲವೇ? ಹಿಂದಿನಿಂದ ಏನು ಮಾಡಿಕೊಂಡು ಬರಲಾಗುತ್ತಿತ್ತೊ ಅದೇ ಕೆಲಸ ಈಗಲೂ ಮಾಡಿಕೊಂಡು ಬರಲಾಗುತ್ತಿದೆ. ಅವರ ಕ್ಷೇತ್ರಗಳಿಗೆ ಅನುದಾನ ಬೇಕು ಎಂದು ಹೀಗೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಕಸದ ಲಾರಿಯಿಂದ ಅಪಘಾತವಾಗಿದೆ ಎನ್ನುವ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ, ಅಪಘಾತ ಆಗಬಾರದಿತ್ತು, ಆಗಿದೆ. ಇದಕ್ಕೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಕಸ ವಿಲೇವಾರಿ ನಿಲ್ಲಿಸಿರುವುದು ಸರಿಯಲ್ಲ. ಎಸ್‌.ಟಿ.ಸೋಮಶೇಖರ್‌, ಶಿವಣ್ಣ, ಕೃಷ್ಣಬೈರೇಗೌಡ ಅವರ ಕ್ಷೇತ್ರಗಳಲ್ಲೂ ಕಸ ವಿಲೇವಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.


Share It

You cannot copy content of this page