ಬೆಂಗಳೂರು: ನಮ್ಮ ಕನ್ನಡ ನಾಡಿಗೆ ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಕಳೆದ 12 ವರ್ಷಗಳಲ್ಲಿ ತಮ್ಮ ಆಡಳಿತದಿಂದ 6.5 ಕೋಟಿ ಕನ್ನಡಿಗರಿಗೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡುವ ಬದಲು, ಕೇವಲ “ಕುರ್ಚಿ” ರಾಜಕಾರಣದ ಬಗ್ಗೆ ಮಾತನಾಡಿರುವುದು ದುರದೃಷ್ಟಕರ ಎಂದು ಸಚಿವ ರಾಮಲಿಂಗಾ ರೆಡ್ಡಿ ಟೀಕಿಸಿದ್ದಾರೆ.
ನಮ್ಮ ಆಂತರಿಕ ಪ್ರಜಾಪ್ರಭುತ್ವವನ್ನು ಪ್ರಧಾನಿಗಳು ಟೀಕಿಸುವ ಮೊದಲು ಕನ್ನಡಿಗರು ಕೇಳುತ್ತಿರುವ ಪ್ರಶ್ನೆಗೆ ಉತ್ತರಿಸಬೇಕು. ಭಾರತದ 2ನೇ ಅತಿದೊಡ್ಡ ಜಿಎಸ್ಟಿ (GST) ಪಾವತಿದಾರ ರಾಜ್ಯವಾದ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಕೊಟ್ಟಿದ್ದೇನು? ಎಂಬುದಕ್ಕೆ ಉತ್ತರ ನೀಡಬೇಕು ಎಂದರು.
ತೆರಿಗೆ ಹಂಚಿಕೆಯಲ್ಲಿ ಅನ್ಯಾಯ:
ಕರ್ನಾಟಕವು ಭಾರತದ ಆರ್ಥಿಕತೆಯ ಎಂಜಿನ್ ಆಗಿದ್ದುಕೊಂಡು 2025-26ರಲ್ಲಿ ₹1.58 ಲಕ್ಷ ಕೋಟಿಗೂ ಹೆಚ್ಚು ಜಿಎಸ್ಟಿ ಒಳಗೊಂಡಂತೆ ಒಟ್ಟು ₹4.5 ಲಕ್ಷ ಕೋಟಿ ವಿವಿಧ ರೂಪದಲ್ಲಿ ತೆರಿಗೆ ಸಂಗ್ರಹಿಸಿದೆ.
ಆದರೆ ಕೇಂದ್ರದಿಂದ ನಮಗೆ ಮರಳಿ ಬರುತ್ತಿರುವುದು ಕೇವಲ ಬಿಡಿಗಾಸು. ಕರ್ನಾಟಕವು ಕೇಂದ್ರಕ್ಕೆ ನೀಡುವ ಪ್ರತಿ 100 ರೂಪಾಯಿಯಲ್ಲಿ ನಮಗೆ ಮರಳಿ ಸಿಗುತ್ತಿರುವುದು ₹13ಕ್ಕಿಂತ ಕಡಿಮೆ ಎಂದು ತಿಳಿಸಿದ್ದಾರೆ.
ನಮ್ಮ ಶ್ರಮದ ಹಣ ಎಲ್ಲಿಗೆ ಹೋಗುತ್ತಿದೆ ಮೋದಿ ಅವರೇ? 12 ವರ್ಷಗಳ ಸುಳ್ಳು ಭರವಸೆಗಳು ಮತ್ತು ಬಾಕಿ ಉಳಿದಿರುವ ಯೋಜನೆಗಳು, 2014 ರಿಂದ, ಕರ್ನಾಟಕದ ಜನತೆಯ ಜೀವನಾಡಿ ಯೋಜನೆಗಳು ದೆಹಲಿಯಲ್ಲಿ ಧೂಳು ಹಿಡಿಯುತ್ತಿವೆ. ಕರ್ನಾಟಕದಿಂದ ದಾಖಲೆ ಸಂಖ್ಯೆಯ ಬಿಜೆಪಿ ಸಂಸದರನ್ನು ಕಳುಹಿಸಿದರೂ ನಮಗೆ ಸಿಕ್ಕಿದ್ದು ಶೂನ್ಯ.
ಮೇಕೆದಾಟು ಯೋಜನೆ: ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡುವ ಈ ಯೋಜನೆಗೆ ವರ್ಷಗಳಿಂದ ಪರಿಸರ ಅನುಮತಿ ನೀಡದೆ ಕೇಂದ್ರ ಸರ್ಕಾರ ಸತಾಯಿಸುತ್ತಿದೆ.
ಭದ್ರಾ ಮೇಲ್ದಂಡೆ ಯೋಜನೆ: ಕೇಂದ್ರ ಬಜೆಟ್ನಲ್ಲಿ ₹5,300 ಕೋಟಿ ಘೋಷಿಸಿ “ರಾಷ್ಟ್ರೀಯ ಯೋಜನೆ” ಎಂದು ಬೆನ್ನು ತಟ್ಟಿಕೊಂಡಿದ್ದ ಕೇಂದ್ರ ಸರ್ಕಾರ, ಈವರೆಗೆ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ.
ಮಹದಾಯಿ (ಕಳಸಾ-ಬಂಡೂರಿ): ಗೆಜೆಟ್ ನೋಟಿಫಿಕೇಶನ್ ಮತ್ತು ಅರಣ್ಯ ಅನುಮತಿ ನೀಡುವಲ್ಲಿ ವಿನಾಕಾರಣ ವಿಳಂಬ ಮಾಡಲಾಗುತ್ತಿದೆ.
ಬೆಂಗಳೂರು ಸಬ್ ಅರ್ಬನ್ ರೈಲು: ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಈ ಯೋಜನೆಗೆ ನಿರಂತರವಾಗಿ ಅನುದಾನದ ಕೊರತೆ ಎದುರಾಗುತ್ತಿದೆ.
ಕೃಷಿ ಮತ್ತು ಬರ / ಪ್ರವಾಹ ಪರಿಹಾರ: ನಮ್ಮ ರೈತರು ಸಂಕಷ್ಟದಲ್ಲಿದ್ದಾಗ ಮಲತಾಯಿ ಧೋರಣೆ ತೋರಿದ ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತಿತ್ತು.
ಕರ್ನಾಟಕವು ಇತ್ತೀಚೆಗೆ ಭೀಕರ ಬರಗಾಲ ಎದುರಿಸಿದಾಗ ನಾವು ₹18,000 ಕೋಟಿಗೂ ಅಧಿಕ ಎನ್ಡಿಆರ್ಎಫ್ (NDRF) ಪರಿಹಾರ ಕೋರಿದ್ದೆವು. ಆದರೆ ಸುಪ್ರೀಂ ಕೋರ್ಟ್ ಚೀಮಾರಿ ಹಾಕುವವರೆಗೂ ಕೇಂದ್ರವು ಪರಿಹಾರ ಬಿಡುಗಡೆ ಮಾಡಲಿಲ್ಲ.
ಅನ್ನಭಾಗ್ಯಕ್ಕೆ ಅಡ್ಡಿ: ನಾವು ಬಡವರಿಗೆ ಉಚಿತ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಜಾರಿಗೆ ತಂದಾಗ, ಕೇಂದ್ರ ಸರ್ಕಾರವು ಎಫ್ಸಿಐ (FCI) ಮೂಲಕ ರಾಜ್ಯಕ್ಕೆ ಅಕ್ಕಿ ಮಾರಾಟ ಮಾಡದಂತೆ ತಡೆಹಿಡಿದು ಬಡವರ ಹೊಟ್ಟೆ ಮೇಲೆ ಹೊಡೆಯಿತು.
ನನೆಗುದಿಗೆ ಬಿದ್ದ ಮೂಲಸೌಕರ್ಯ ಯೋಜನೆಗಳು: ರಾಯಚೂರಿನಲ್ಲಿ ಘೋಷಿತ AIIMS (ಏಮ್ಸ್) ಆಸ್ಪತ್ರೆ ಎಲ್ಲಿದೆ?
ರಾಜ್ಯ ಸರ್ಕಾರ ಸುಮಾರು 1,100 ಎಕರೆ ಭೂಮಿ ನೀಡಿದರೂ ರೈಲ್ವೆ ಕೋಚ್ ಕಾರ್ಖಾನೆ ಏಕಾಗಲಿಲ್ಲ?
ಚುನಾವಣೆ ನಡೆಯುವ ರಾಜ್ಯಗಳಿಗೆ ನೀಡುವ ಆದ್ಯತೆ ನಮ್ಮ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಏಕೆ ಸಿಗುತ್ತಿಲ್ಲ?
ಪ್ರಧಾನಮಂತ್ರಿಯವರೇ, ಜನರ ಆಶೀರ್ವಾದವಿರುವ ನಮ್ಮ ‘ಕುರ್ಚಿ’ಗಳು ಭದ್ರವಾಗಿವೆ.
ಆದರೆ ಕರ್ನಾಟಕದ ಬಗ್ಗೆ ನಿಮ್ಮ ‘ಉದ್ದೇಶ’ ಮಾತ್ರ ಅಲುಗಾಡುತ್ತಿದೆ.
ಕೇವಲ ಭಾಷಣ ಮಾಡಲು ಬೆಂಗಳೂರಿಗೆ ಬಂದರೆ ಉಪಯೋಗವಿಲ್ಲ; ನಮ್ಮ ರಾಜ್ಯಕ್ಕೆ ಬರಬೇಕಾದ ನ್ಯಾಯಯುತವಾದ ಅನುದಾನ ಮತ್ತು ಯೋಜನೆಗಳ ಅನುಮತಿಯೊಂದಿಗೆ ಬಂದರೆ ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.

