ಅಪರಾಧ ರಾಜಕೀಯ ಸುದ್ದಿ

ಕೇಜ್ರಿವಾಲ್ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ದೆಹಲಿ ಕೋರ್ಟ್

Share It

ನವದೆಹಲಿ: ಈಗ ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿ ಅಕ್ರಮಗಳಿಗೆ ಸಂಬಂಧಿಸಿ ಕೇಂದ್ರ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿ ಜಾಮೀನು ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಸಲ್ಲಿಸಿದ್ದು, ಆದೇಶವನ್ನು ದೆಹಲಿ ನ್ಯಾಯಾಲಯ ಕಾಯ್ದಿರಿಸಿದೆ.

ವೈದ್ಯಕೀಯ ಮಂಡಳಿಯ ಪರೀಕ್ಷೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸಲು ಪತ್ನಿ ಸುನಿತಾ ಕೇಜ್ರಿವಾಲ್‌ಗೆ ಅನುಮತಿ ನೀಡುವಂತೆ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ಆದೇಶವನ್ನೂ ನ್ಯಾಯಾಲಯ ಕಾಯ್ದಿರಿಸಿದೆ.

ರೋಸ್ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶ ನಿಯಾಯ್ ಬಿಂದು ಅವರು ಗುರುವಾರ ಈ ಪ್ರಕರಣದ ಆದೇಶವನ್ನು ಕಾಯ್ದಿರಿಸುವ ಮೊದಲು 2 ದಿನಗಳ ಕಾಲ ವಿಚಾರಣೆ ನಡೆಸಿದ್ದರು. ಎಲ್ಲಾ ವಕೀಲರು ತಮ್ಮ ವಾದಗಳಲ್ಲಿ ಸಂಕ್ಷಿಪ್ತವಾಗಿರಲು ಕೇಳಿದಾಗ ನ್ಯಾಯಾಧೀಶರು ಈ ವಿಷಯವನ್ನು ಅನಿರ್ದಿಷ್ಟವಾಗಿ ಬಾಕಿ ಇರಿಸಲು ಬಯಸುವುದಿಲ್ಲ ಎಂದು ಸೂಚಿಸಿದರು.

ದೆಹಲಿ ಮುಖ್ಯಮಂತ್ರಿ ಜಾಮೀನು ಅರ್ಜಿ ವಿರೋಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌.ವಿ ರಾಜು, ಅಪರಾಧದ ಆದಾಯದ ಒಂದು ಭಾಗವನ್ನು ಗೋವಾ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಸಂಚಾಲಕನ ಹೋಟೆಲ್ ವಾಸ್ತವ್ಯಕ್ಕೆ ಬಳಸಲಾಗಿದೆ ಎಂದು ಸಾಬೀತುಪಡಿಸಲು ಇಡಿ ಸಾಕ್ಷ್ಯಾಧಾರಗಳನ್ನು ಹೊಂದಿದೆ ಎಂದು ವಾದಿಸಿದರು.

ಗೋವಾ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಪ್ರಚಾರಕ್ಕಾಗಿ ಹಣ ನಿರ್ವಹಿಸಿದ ಸಹ-ಆರೋಪಿ ಚನ್‌ಪ್ರೀತ್ ಸಿಂಗ್ ಸ್ವೀಕರಿಸಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಫೆಡರಲ್ ಏಜೆನ್ಸಿ ದೂರವಾಣಿ ಕರೆ ಮತ್ತು ಕರೆ ಡೇಟಾ ದಾಖಲೆಗಳ (ಸಿಡಿಆರ್) ರೂಪದಲ್ಲಿ ಸಾಕ್ಷ್ಯವನ್ನು ಹೊಂದಿದೆ. ವಿವಿಧ ಅಂಗಡಿಯಾ ನೆಟ್​​ವರ್ಕ್​​​ಗಳ (ಅಂಗಡಿಯಾ ಅಂದರೆ ಅಮೂಲ್ಯ ವಸ್ತುಗಳ ವ್ಯವಹಾರಕ್ಕಾಗಿ ಬಳಸುವ ವಿಶ್ವಾಸಾರ್ಹ ನೆಟ್​​ವರ್ಕ್ ಇದಾಗಿದ್ದು, ಇದು ಬ್ಯಾಂಕ್​​​ನಂತೆಯೇ ಕಾರ್ಯನಿರ್ವಹಿಸುತ್ತದೆ) ಮೂಲಕ 45 ಕೋಟಿ ರೂ. ನಗದು ಸ್ವೀಕರಿಸಿದ್ದು ಅರವಿಂದ್ ಕೇಜ್ರಿವಾಲ್ ಗೋವಾದಲ್ಲಿ ತಂಗಿದ್ದಕ್ಕಾಗಿ ಈ ನೆಟ್​​ವರ್ಕ್​​​ಗಳ ಖಾತೆಯಿಂದ ಪಾವತಿಸಲಾಗಿದೆ.

ಈ ನೆಟ್​​ವರ್ಕ್​​​ಗಳಿಂದ ವಶಪಡಿಸಿಕೊಂಡ ಟೋಕನ್ ಸಂಖ್ಯೆಗಳು ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ನೇರ ಸಂಪರ್ಕವನ್ನು ಹೊಂದಿವೆ ಎಂದು ಕಾನೂನು ಅಧಿಕಾರಿ ತಿಳಿಸಿದ್ದಾರೆ.

“ಇಡಿ ಸುಖಾಸುಮ್ಮನೆ ತನಿಖೆ ನಡೆಸುತ್ತಿದೆ ಎಂದಲ್ಲ. ಖಚಿತವಾದ ಪುರಾವೆಗಳಿವೆ” ಎಂದು ರಾಜು ಹೇಳಿದ್ದಾರೆ.

ಗೋವಾ ಚುನಾವಣೆಯ ಪ್ರಚಾರದ ವೇಳೆ “ಸೌತ್ ಗ್ರೂಪ್” ನಿಂದ ಎಎಪಿಗೆ ನಗದು ಲಂಚವನ್ನು ವರ್ಗಾಯಿಸಿದ ಆರೋಪದ ಸಹ ಆರೋಪಿ ವಿನೋದ್ ಚೌಹಾಣ್ ಅವರೊಂದಿಗೆ ಸಿಎಂ “ಉತ್ತಮ ಸಂಬಂಧ” ಹೊಂದಿದ್ದಾರೆ ಎಂದು ಕಾನೂನು ಅಧಿಕಾರಿ ತಿಳಿಸಿದ್ದಾರೆ. “ಸಿಎಂ ಈ ನೆಟ್ವರ್ಕ್ ಮಾಲೀಕರೊಂದಿಗೆ ಏನು ಮಾಡುತ್ತಿದ್ದರು? ಅರವಿಂದ್ ಕೇಜ್ರಿವಾಲ್ ವಿನೋದ್ ಚೌಹಾನ್ ಅವರೊಂದಿಗೆ ಚಾಟ್ ಮಾಡುತ್ತಿದ್ದರು” ಎಂದು ರಾಜು ಹೇಳಿದ್ದಾರೆ.

ಎಎಪಿಯ ವ್ಯವಹಾರಗಳಿಗೆ ಸಿಎಂ ನೇರ ಜವಾಬ್ದಾರರು ಮತ್ತು ಪಕ್ಷದ ಮೂಲಕ ಮಾಡಿದ ಅಕ್ರಮ ಹಣ ವರ್ಗಾವಣೆಗೆ ನೇರ ಹೊಣೆಗಾರರು ಎಂದು ಅವರು ಹೇಳಿದರು. ಬಂಧನದ ಸಮಯಕ್ಕೆ ಸಂಬಂಧಿಸಿ ಇಡಿ ಆತುರದಲ್ಲಿ ಕಾರ್ಯನಿರ್ವಹಿಸಲಿಲ್ಲ. “ವಿವರವಾದ ದಾಖಲೆಗಳನ್ನು” ಪರಿಗಣಿಸಿ ಯಾವುದೇ ಬಲವಂತದ ಕ್ರಮದ ಪರಿಹಾರವನ್ನು ದೆಹಲಿ ಹೈಕೋರ್ಟ್ ನಿರಾಕರಿಸಿದ ನಂತರವೇ ಸಿಎಂ ಅವರನ್ನು ಬಂಧಿಸಿದೆ. ವಿಭಾಗೀಯ ಪೀಠವು ಸಾಕ್ಷ್ಯಗಳು ಸಮರ್ಪಕವಾಗಿದೆ ಎಂದು ಕಂಡುಹಿಡಿದಿದೆ. ಇಡಿ ನೀಡಿದ್ದ 9 ಸಮನ್ಸ್‌ಗಳಿಗೆ ಹಾಜರಾಗದಿದ್ದರೂ ಫೆಡರಲ್ ಏಜೆನ್ಸಿ ಸಿಎಂ ಕೇಜ್ರಿವಾಲ್ ಅವರನ್ನು ಬಂಧಿಸಲಿಲ್ಲ ಎಂದು ರಾಜು ಹೇಳಿದ್ದಾರೆ.


Share It

You cannot copy content of this page