ಕೊಪ್ಪಳ: ಸರಕಾರಿ ಕೆಲಸ ಸಿಕ್ಕ ಮೇಲೆ ಮದುವೆಯಾಗುತ್ತೇನೆ ಎಂದು ನಂಬಿಸಿ ಅತ್ತೆ ಮಗಳಿಗೆ ಮೋಸ ಮಾಡಿ, ಕೆಲಸ ಸಿಕ್ಕ ನಂತರ ಬೇರೊಂದು ಯುವತಿ ಜತೆಗೆ ಮದುವೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಶಿಕ್ಷಕ ಬಸವರಾಜ್ ಎಂಬಾತನ ವಿರುದ್ಧ ಆತನ ಅತ್ತೆ ಮಗಳಿಂದಲೇ ದೂರು ದಾಖಲಾಗಿದ್ದು, ತನ್ನನ್ನು ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ದೌರ್ಜನ್ಯ ನಡೆಸಿ, ಇದೀಗ ಬೇರೊಂದು ಯುವತಿ ಜತೆಗೆ ಮದುವೆ ಮಾಡಿಕೊಂಡು ಮೋಸ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಕನ್ನೇರಮಡುವಿನ ಪದವಿ ವಿದ್ಯಾರ್ಥಿಯೊಬ್ಬರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಶಿಕ್ಷಕ ಬಸವರಾಜ್ ತನ್ನ ಅತ್ತೆ ಮಗಳ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ, ಕೆಲಸ ಸಿಕ್ಕ ನಂತರ ಮದುವೆಯಾಗುತ್ತೇನೆ ಎಂದು ಆಕೆಯನ್ನು ನಂಬಿಸಿದ್ದ.
ಆದರೆ, ತನಗೆ ಕೆಲಸ ಸಿಕ್ಕುತ್ತಿದ್ದಂತೆ ಅತ್ತೆ ಮಗಳಿಗೆ ಕೈಕೊಟ್ಟು ಬೇರೊಬ್ಬ ಯುವತಿ ಜತೆಗೆ ಮದುವೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಅತ್ನವ್ವ ಎಂಬಾಕೆಯನ್ನು ತಾನು ಮದುವೆ ಮಾಡಿಕೊಂಡಿರುವುದಾಗಿ ವಿವಾಹ ನೋಂದಣಿ ಪತ್ರವನ್ನು ವಾಟ್ಸಾಪ್ಗೆ ಕಳುಹಿಸಿದ್ದಾನೆ ಎಂದು ದೂರಲಾಗಿದೆ.
ಅತ್ತೆ ಮಗನ ಮೋಸದಾಟಕ್ಕೆ ಬೇಸತ್ತು ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಗೆ ನ್ಯಾಯ ಕೊಡಿಸುವಂತೆ ಕೇಳಿಕೊಂಡಿದ್ದಾಳೆ. ಪ್ರರಕಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

