ಉಪಯುಕ್ತ ಸುದ್ದಿ

ಬೆಂಗಳೂರು ಕರಗ ಮಹೋತ್ಸವ: ಭದ್ರತೆಗೆ 3 ಸಾವಿರ ಪೊಲೀಸರು, 25 ಸಾವಿರ ಸಿಸಿಟಿವಿ ಅಳವಡಿಕೆ

Share It

ಬೆಂಗಳೂರು: ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕರಗ ಮಹೋತ್ಸವ ಮಂಗಳವಾರ ನಡೆಯಲಿದೆ.‌ ಹೀಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಕರಗ ಎಲ್ಲಿಲ್ಲಿ ಬರಲಿದೆ ಎನ್ನುವುದ ಸಂಪೂರ್ಣ ವಿವರ ಸಿದ್ಧವಾಗಿದೆ.

ನಾಳೆ ಮಂಗಳವಾರ ಮಧ್ಯರಾತ್ರಿ 2 ಗಂಟೆಯಿಂದ ಬೆಳಗ್ಗೆ 10 ಗಂಟೆಯವರೆಗೂ ಕರಗ ಮಹೋತ್ಸವ ನಡೆಯಲಿದೆ. ಅದ್ದೂರಿಯಾಗಿ ಕರಗವನ್ನು ಬರಮಾಡಿಕೊಳ್ಳಲು ಕರಗ ಸಮಿತಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ನಾಳೆ ಬೆಳಗ್ಗೆಯಿಂದ ಕರಗದ ಶಾಸ್ತ್ರಗಳು ಆರಂಭವಾಗಿ ಮಧ್ಯರಾತ್ರಿವರೆಗೂ ನಡೆಯಲಿದ್ದು, ಶಾಸ್ತ್ರಗಳು ಮುಗಿದ ನಂತರ ಮಧ್ಯರಾತ್ರಿ 2 ಗಂಟೆಗೆ ಅಧಿಕೃತವಾಗಿ ಕರಗ ಶಾಕೋತ್ಸವ ಆರಂಭವಾಗಲಿದೆ.

ಸದ್ಯ ಹಸಿ ಕರಗ ನಡೆದ ನಂತರ ತಾಯಿ ದ್ರೌಪದಿ ತಾಯಿ ನೆಲೆಸಿದ್ದಾಳೆ ಎಂದೇ ಪರಿಗಣನೆ ಮಾಡಲಾಗುತ್ತದೆ. ಹೀಗಾಗಿ ನಾಳೆ‌ ತಾಯಿಗೆ ವಿಶೇಷ ಶಾಸ್ತ್ರಗಳನ್ನು ಮಾಡಲಾಗುತ್ತದೆ. ‌ಅದರಲ್ಲಿ ಬಳೆ ಶಾಸ್ತ್ರ, ತಾಳಿ ಶಾಸ್ತ್ರ, ಹೂ ಶಾಸ್ತ್ರಗಳು ನೆರೆವೇರಲಿವೆ. ನಾಳೆ‌ ರಾತ್ರಿ 2 ಗಂಟೆಗೆ ಕರಗ ಆರಂಭವಾಗಲಿದ್ದು, ನಾಡಿದ್ದು ಬುಧವಾರ ಬೆಳಗ್ಗೆ 8 ಗಂಟೆಗೆ ದೇವಾಲಯಕ್ಕೆ ವಾಪಾಸ್ ಬರಬಹುದು.‌ ಹಿಂದಿನ ಸಂಪ್ರದಾಯದಂತೆ ಎಲ್ಲ ಪೇಟೆಗಳಲ್ಲಿಯೂ ಕರಗ ಮೆರವಣಿಗೆ ಈ ಬಾರಿಯೂ ಇರಲಿದೆ.

ಕರಗ ಮೆರವಣಿಗೆ ಮೊದಲು ಮಸ್ತಾನ್ ಸಾಬ್ ದರ್ಗಾ ಭೇಟಿ ಮಾಡಿ, ಅಣ್ಣಮ್ಮ ದೇವಾಲಯದ ಮೂಲಕ ತಿಗಳರಪೇಟೆಯಿಂದ ವಾಪಸ್ ಧರ್ಮರಾಯ ದೇಗುಲಕ್ಕೆ ಬರಲಿದೆ. ಸದ್ಯ ಕರಗಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು,‌ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸೇರುವ ಸಾಧ್ಯತೆ ಇದೆ.‌‌ ಹೀಗಾಗಿ ಎಲ್ಲಿಯೂ ಕೊಂಚ ಸಮಸ್ಯೆಯೂ ಆಗದಂತೆ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು ಕರಗಕ್ಕೆ ಬಿಗಿ ಬಂದೋಬಸ್ತ್…
ಕರಗಕ್ಕೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. 3 ಸಾವಿರ ಪೊಲೀಸರ ನಿಯೋಜನೆ ಮಾಡಲಾಗುತ್ತಿದ್ದು, 25 ಸಾವಿರ ಸಿಸಿಟಿವಿ ಅಳವಡಿಕೆ‌ ಮಾಡಲಾಗಿದೆ.‌ ಕರಗ ಮಹೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುವ ಸಾಧ್ಯತೆ ಇದೆ ಎಂದು ಕರಗ ಸಮಿತಿ ಅಧ್ಯಕ್ಷ ಸತೀಶ್ ಹೇಳಿದ್ದಾರೆ.

ಎಲ್ಲಿಲ್ಲಿ ಕರಗ ಮೆರವಣಿಗೆ?
ಕರಗ ಮೆರವಣಿಗೆ ಮೊದಲು ಕಬ್ಬನ್ ಪೇಟೆಯಿಂದ ಆರಂಭವಾಗಿ, ರಾಜ ಮಾರ್ಕೆಟ್ ಸರ್ಕಲ್, ಕೆಆರ್ ಮಾರ್ಕೆಟ್, ಅಂಜನೇಯ ದೇವಸ್ಥಾನ ಮಾರ್ಗವಾಗಿ ಗಣೇಶ ದೇವಸ್ಥಾನ ತಲುಪಲಿದೆ. ತದನಂತರ 4 ಗಂಟೆ ಸುಮಾರಿಗೆ ಪೊಲೀಸ್ ಬಂದೋಬಸ್ತ್​​ನಲ್ಲಿ ಮಸ್ತಾನ್ ಸಾಬ್ ದರ್ಗಾ ತಲುಪಲಿದೆ. ನಂತರ ಮೆಜೆಸ್ಟಿಕ್ ಅಣ್ಣಮ್ಮ ದೇವಸ್ಥಾನ, ಮೈಸೂರ್ ಬ್ಯಾಂಕ್ ಸರ್ಕಲ‌್ ಮುಖಾಂತರವಾಗಿ ಬಂದು ಕುಂಬಾರ ಪೇಟೆ, ತಿಗಳರ ಪೇಟೆ, ಎಸ್​​ಪಿ ರೋಡ್, ದೇವಸ್ಥಾನ ಮುಖಾಂತರ ಮೇಲ್ ಪೇಟೆಗೆ ಬಂದು ನಂತರ ಧರ್ಮರಾಯ ದೇವಸ್ಥಾನ ತಲುಪಲಿದೆ ಎಂದು ಕರಗ ಸಮಿತಿ ಅಧ್ಯಕ್ಷ ಸತೀಶ್ ಕರಗ ತಿಳಿಸಿದ್ದಾರೆ.


Share It

You cannot copy content of this page