ಬೆಂಗಳೂರು: ರಾಮನವಮಿ ಆಚರಣೆಯ ಕಾರಣ ಬುಧವಾರ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ. ರಾಮ ನವಮಿಯ ಕಾರಣ ನಗರದಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿ ಹತ್ಯೆಯನ್ನು ನಿಷೇಧಿಸಲಾಗಿದೆ ಎಂದು ಬಿಬಿಎಂಪಿಯ ಪಶುಸಂಗೋಪನಾ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಸಾಮಾನ್ಯವಾಗಿ ಹಿಂದೂ ಹಬ್ಬಗಳ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಪ್ರತಿ ಬಾರಯೂ ಬಿಬಿಎಂಪಿ ಈ ಕ್ರಮ ಕೈಗೊಳ್ಳುತ್ತದೆ.
ಹಿಂದೂ ಧರ್ಮದಲ್ಲಿ ರಾಮ ನವಮಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ರಾಮ ನವಮಿ ಹಬ್ಬವನ್ನು ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನಾಂಕದಂದು ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮರ್ಯಾದಾ ಪುರುಷೋತ್ತಮ ಭಗವಾನ್ ರಾಮನು ಜನಿಸಿದ ದಿನ ಇದಾಗಿದೆ.
ರಾಮ ನವಮಿ ಶುಭ ಸಮಯ ಯಾವಾಗ?
ರಾಮ ನವಮಿ ಹಬ್ಬವು ಚೈತ್ರ ನವರಾತ್ರಿಯ ಕೊನೆಯ ದಿನವಾಗಿದೆ. ಚೈತ್ರ ನವರಾತ್ರಿ ರಾಮ ನವಮಿಯೊಂದಿಗೆ ಕೊನೆಗೊಳ್ಳುತ್ತದೆ. ರಾಮನವಮಿಯಂದು ಶ್ರೀರಾಮನ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಈ ದಿನದಂದು, ಭಗವಾನ್ ರಾಮನ ಜೊತೆಗೆ ತಾಯಿ ಸೀತೆ, ಲಕ್ಷ್ಮಣ ಮತ್ತು ಹನುಮಾನ್ ಅನ್ನೂ ಪೂಜಿಸಲಾಗುತ್ತದೆ.
ಹಿಂದೂ ಕ್ಯಾಲೆಂಡರ್ನ ಲೆಕ್ಕಾಚಾರದ ಪ್ರಕಾರ, ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯು ಏಪ್ರಿಲ್ 16 ರಂದು ಮಧ್ಯಾಹ್ನ 01:23 ರಿಂದ ಪ್ರಾರಂಭವಾಗುತ್ತದೆ. ನವಮಿ ತಿಥಿ ಏಪ್ರಿಲ್ 17 ರಂದು ಮಧ್ಯಾಹ್ನ 03:15 ಕ್ಕೆ ಕೊನೆಗೊಳ್ಳುತ್ತದೆ. ಬೆಳಗ್ಗಿನ ವೇಳೆ ತಿಥಿ ಆರಂಭವಾಗುವ ಆಧಾರದ ಮೇಲೆ, ಏಪ್ರಿಲ್ 17 ರಂದು ರಾಮ ನವಮಿ ಹಬ್ಬವನ್ನು ಆಚರಿಸಲಾಗುತ್ತದೆ.
ರಾಮನವಮಿ ಹಬ್ಬವನ್ನು ಪ್ರತಿ ವರ್ಷ ದೇಶದಾದ್ಯಂತ ಅತ್ಯಂತ ಭಕ್ತಿಯಿಂದ ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಭಗವಾನ್ ರಾಮನು ವಿಷ್ಣುವಿನ ಏಳನೇ ಅವತಾರವಾಗಿ ಜನಿಸಿದನು. ಭಗವಾನ್ ರಾಮನು ಅಯೋಧ್ಯೆಯ ರಾಜ ದಶರಥನ ಹಿರಿಯ ಮಗನಾಗಿ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಜನಿಸಿದನು. ಈ ಕಾರಣಕ್ಕಾಗಿ, ಪ್ರತಿ ವರ್ಷ ರಾಮನವಮಿ ಹಬ್ಬವನ್ನು ಭಗವಾನ್ ರಾಮನ ಜನ್ಮದಿನವಾಗಿ ಆಚರಿಸಲಾಗುತ್ತದೆ.