ಬೆಂಗಳೂರು:
ವರ್ಷದ ಆರಂಭದಲ್ಲಿ ಅಂದರೆ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿದೆ. ರಾಮಲಲ್ಲಾ ಐತಿಹಾಸಿಕ ಪ್ರಾಣ ಪ್ರತಿಷ್ಠಾಪನಾ ಗೌರವಾರ್ಥವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು 50 ಗ್ರಾಂ ಇರುವ ಬೆಳ್ಳಿ ನಾಣ್ಯವನ್ನು ಸಾರ್ವಜನಿಕ ಮಾರಾಟಕ್ಕೆ ಪರಿಚಯಿಸಿದೆ.
ಈ ಬೆಳ್ಳಿ ನಾಣ್ಯಗಳ ಮಾರಾಟವು ಸೀಮಿತ ಅವಧಿಗೆ ಮಾತ್ರ ಲಭ್ಯವಿದ್ದು, 5,860 ರೂ. ಬೆಲೆ ಹೊಂದಿದೆ. ಇತ್ತೀಚೆಗೆ ಫೆಬ್ರವರಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೂರು ನಾಣ್ಯಗಳನ್ನು ಅನಾವರಣಗೊಳಿಸಿದ್ದರು. ರಾಮಲಲ್ಲಾ ಮತ್ತು ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯನ್ನು ನಾಣ್ಯದಲ್ಲಿ ಕಾಣಬಹುದಾಗಿದೆ.
ರಾಮಲಲ್ಲಾರ ನಾಣ್ಯದ ಜೊತೆಗೆ, ಬುದ್ಧನ ಜ್ಞಾನೋದಯವನ್ನು ಪ್ರತಿನಿಧಿಸುವ ದ್ವಿ-ಲೋಹದ ಹೊದಿಕೆಯ ಸ್ಮಾರಕ ನಾಣ್ಯವನ್ನು ಸಹ ಸೀತಾರಾಮನ್ ಅವರು ಅನಾವರಣಗೊಳಿಸಿದ್ದರು. ಬುದ್ಧ ಮತ್ತು ಸ್ತೂಪದ ಆಕ್ಸಿಡೀಕೃತ ಚಿತ್ರಗಳನ್ನು ಮತ್ತು ಅಳಿವಿನಂಚಿನಲ್ಲಿರುವ ಒಂದು ಕೊಂಬಿನ ಘೇಂಡಾಮೃಗವನ್ನು ಒಳಗೊಂಡ ನಾಣ್ಯವನ್ನು ಸಹ ಬಿಡುಗಡೆ ಮಾಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22 ರಂದು ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾ ಕಾರ್ಯಗಳಲ್ಲಿ ನೇತೃತ್ವ ವಹಿಸಿದ್ದರು. ಇದು ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ಭೂದೃಶ್ಯದಲ್ಲಿ ಐತಿಹಾಸಿಕ ಕ್ಷಣವಾಗಿದ್ದು, ದೇವಾಲಯದ ನಿರ್ಮಾಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ಕೋಟ್ಯಾನು ಕೋಟಿ ಭಕ್ತರ ಪಾಲಿನ ರಾಮಲಲ್ಲಾ ಅಯೋಧ್ಯೆಯ ಭವ್ಯ ಮಂದಿರದಲ್ಲಿ ವಿರಾಜಮಾನನಾಗಿ ಸುಮಾರು ದಿನಗಳು ಕಳೆದಿವೆ. ಉದ್ಘಾಟನೆಯಾದ ಮರುದಿನವೇ ಭಕ್ತಕೋಟಿ ರಾಮನ ದರ್ಶನಕ್ಕೆ ದಾಂಗುಡಿ ಇಟ್ಟಿದ್ದರು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಹರಿದುಬರುತ್ತಿದ್ದಾರೆ. ಸರಿಸುಮಾರು 6 ಲಕ್ಷ ಜನ ದರ್ಶನ ಪಡೆದಿದ್ದಾರೆ ಎನ್ನಲಾಗಿದೆ.