ಚನ್ನರಾಯಪಟ್ಟಣ (ಶ್ರವಣಬೆಳಗೊಳ): ತಮಿಳುನಾಡು ರಾಜ್ಯದ ರಾಜ್ಯಪಾಲರಾದ ರವೀಂದ್ರ ನಾರಾಯಣ ರವಿ ಹಾಗೂ ಅವರ ಪತ್ನಿ ಲಕ್ಷ್ಮಿರವರು ಮಂಗಳವಾರ ಶ್ರೀಕ್ಷೇತ್ರ ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟಕ್ಕೆ ಭೇಟಿ ನೀಡಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಹಾಗೂ ಶ್ರೀ ಮಠಕ್ಕೆ ಆಗಮಿಸಿ ಶ್ರೀ ಕೂಷ್ಮಂಡಿನಿ ದೇವಿಯ ದರ್ಶನ ಪಡೆದರು.
ನಂತರ ಪರಮಪೂಜ್ಯ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರೊಂದಿಗೆ ಸಮಾಲೋಚನೆ ನಡೆಸಿ ಆಶೀರ್ವಾದ ಪಡೆದರು. ಆರ.ಎನ್.ರವಿ ದಂಪತಿಗಳಿಗೆ ಕ್ಷೇತ್ರದ ವತಿಯಿಂದ ಗ್ರಂಥಗಳು, ಶ್ರೀಫಲ ಹಾಗೂ ರಜತ ಕಳಶ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶ್ವಪ್ರಸಿದ್ದ ಬಾಹುಬಲಿ ಸ್ವಾಮಿಯ ಏಕಶಿಲಾ ಮೂರ್ತಿ, ಕ್ಷೇತ್ರದ ಐತಿಹಾಸಿಕ ಹಿನ್ನೆಲೆ, ಶಿಲಾ ಶಾಸನಗಳು, ಧಾರ್ಮಿಕ ವಿಧಿ-ವಿಧಾನ, ಕಲೆ-ಸಾಹಿತ್ಯದ ಜೀವಂತಿಕೆಯನ್ನು ನೋಡಿ ಬಹಳ ಖುಷಿಯಾಯಿತು. ಶಾಲಾ ದಿನಗಳಲ್ಲಿ ಚಂದ್ರಗುಪ್ತ ಮೌರ್ಯ ಹಾಗೂ ಭದ್ರಬಾಹು ಮುನಿಗಳ ಬಗ್ಗೆ ಓದಿದ್ದೆನು. ಅಂದಿನಿಂದಲೂ ಶ್ರವಣಬೆಳಗೊಳಕ್ಕೆ ಬರಬೇಕು ಎಂದು ಅಪೇಕ್ಷೆ ಇತ್ತು ಎಂದು ಹೇಳಿದರು. ಮುಂದಿನ 2030ರ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಬರುವುದಾಗಿ ತಿಳಿಸಿದರು.