ರಾಜಕೀಯ ಸುದ್ದಿ

ಸಿಇಟಿ ಮರುಪರೀಕ್ಷೆ ಇಲ್ಲ

Share It

ಬೆಂಗಳೂರು: ಇದೇ ಏಪ್ರಿಲ್ 18 ಹಾಗೂ 19ರಂದು ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಉತ್ತರ ಪತ್ರಿಕೆಗಳಲ್ಲಿ ಪಠ್ಯೇತರ ಪ್ರಶ್ನೆಗಳನ್ನು ಹೊರತುಪಡಿಸಿ ಪಠ್ಯದ ಪ್ರಶ್ನೆಗಳನ್ನು ಮಾತ್ರ ಮೌಲ್ಯ ಮಾಪನ ಮಾಡಲು ಸರ್ಕಾರ ತೀರ್ಮಾನಿಸಿದೆ.

ಈ ಮೂಲಕ ಮರು ಪರೀಕ್ಷೆ ನಡೆಸದಿರಲು ಸರ್ಕಾರ ನಿರ್ಧರಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ನೆಮ್ಮದಿ ಸಿಕ್ಕಂತಾಗಿದೆ. ಭೌತಶಾಸ್ತ್ರ ವಿಷಯದಲ್ಲಿ 9 ಪ್ರಶ್ನೆಗಳು ರಸಾಯನ ಶಾಸ್ತ್ರ ವಿಷಯದಲ್ಲಿ 15 ಪ್ರಶ್ನೆಗಳು, ಗಣಿತ ವಿಷಯದಲ್ಲಿ 15 ಪ್ರಶ್ನೆಗಳು ಹಾಗೂ ಜೀವಶಾಸ್ತ್ರ ವಿಷಯದಲ್ಲಿ 11 ಪ್ರಶ್ನೆಗಳನ್ನು ಹೊರತುಪಡಿಸಿ ಮೌಲ್ಯಮಾಪನ ನಡೆಯಲಿದೆ.

2023-24 ನೇ ಸಾಲಿನಲ್ಲಿ ನಡೆದ ಸಿಇಟಿ ಪ್ರಶ್ನೆಪತ್ರಿಕೆಯಲ್ಲಿ 50 ಪ್ರಶ್ನೆಗಳು ಸಿಲೆಬಸ್ ಹೊರತಾಗಿ ಇದೆ ಎಂದು ತಜ್ಞರ ಸಮಿತಿ ವರದಿಯಲ್ಲಿ ತಿಳಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮತ್ತೆ ಮರು ಪರೀಕ್ಷೆ ಮಾಡುವ ಬದಲು ಆ ಪ್ರಶ್ನೆಗಳನ್ನು ಹೊರತುಪಡಿಸಿ ಉಳಿದ ಪ್ರಶ್ನೆಗಳ ಉತ್ತರಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು ಮೌಲ್ಯಮಾಪನ ಮಾಡುವುದಾಗಿ ಇಲಾಖೆ ತಿಳಿಸಿದೆ.

ಸಿಇಟಿ ಮರುಪರೀಕ್ಷೆ ಬೇಡ: ತಜ್ಞರ ಸಮಿತಿ ಅಭಿಮತ: ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಮರು ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ಸರ್ಕಾರ ತೀರ್ಮಾನಿಸಿದೆ. ಮೇ ಜೂನ್ ತಿಂಗಳಲ್ಲಿ ಕಾಮೆಡ್ ಕೆ, ಜೆ.ಇ.ಇ, ನೀಟ್, ಎನ್.ಇ.ಎಸ್. ಟಿ.ಸಿ.ಯು.ಇ.ಟಿ, ದ್ವಿತೀಯ ಪಿಯುಸಿಗೆ ಮರುಪರೀಕ್ಷೆ ಸೇರಿದಂತೆ ಅನೇಕ ಪರೀಕ್ಷೆಗಳು ನಡೆಯಲಿವೆ. ಈ ಹಂತದಲ್ಲಿ ಮತ್ತೆ ಸಿಇಟಿಗೆ ಮರುಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ಸರ್ಕಾರ ನಿರ್ಧರಿಸಿದೆ.

ಪಠ್ಯೇತರ ಪ್ರಶ್ನೆಗಳನ್ನು ಹೊರತುಪಡಿಸುವ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯ ಮತ್ತು ಪರೀಕ್ಷಾ ವ್ಯವಸ್ಥೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದೆ. ಸರಿಯಾದ ಕೀ ಉತ್ತರಗಳನ್ನು ಒದಗಿಸದ 2 ಪ್ರಶ್ನೆಗಳಿಗೆ ಗ್ರೇಸ್ ಅಂಕಗಳನ್ನು ನೀಡಲೂ ತೀರ್ಮಾನಿಸಿದೆ.

ಭವಿಷ್ಯದಲ್ಲಿ ಇಂತಹ ಅವಘಡಗಳನ್ನು ನಿಯಂತ್ರಿಸಲು ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವಾಗ ಎಚ್ಚರ ವಹಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ. ಪಠ್ಯೇತರ ಪ್ರಶ್ನೆಗಳು ಇನ್ನೂ ಹೆಚ್ಚು ಎಂದು ವಿದ್ಯಾರ್ಥಿಗಳು ವಾದಿಸುತ್ತಾರೆ. ಮೊದಲ ವರ್ಷದ ಪಿಯುಸಿಯ ಪಠ್ಯದ ಪ್ರಶ್ನೆಗಳನ್ನು ಕೇಳಲಾಗಿದ್ದು, ಇದು ಪಠ್ಯೇತರ ಅಲ್ಲ ಎಂದು ಎಂದು ತಜ್ಞರ ಸಮಿತಿ ಅಭಿಪ್ರಾಯಪಟ್ಟಿದೆ.

ಪಠ್ಯಕ್ಕೆ ಹೊರತಾದ ಪ್ರಶ್ನೆ, ಕೃಪಾಂಕ ನೀಡಲು ಶಿಫಾರಸು
ಪಠ್ಯಕ್ಕೆ ಹೊರತಾದ ಶೇ. 25ರಷ್ಟು ಪ್ರಶ್ನೆಗಳನ್ನು ಕೇಳಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪವನ್ನು ಪರಿಶೀಲಿಸಿ ವರದಿ ನೀಡಲು ಆಯಾ ವಿಷಯವಾರು ತಜ್ಞರನ್ನು ಒಳಗೊಂಡ 4 ಸಮಿತಿಗಳನ್ನು ರಚಿಸಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು.

ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳಿಂದಾಗಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ಮರು ಪರೀಕ್ಷೆ ನಡೆಸಬೇಕು, ಇಲ್ಲವೇ ಕೃಪಾಂಕ ನೀಡಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು, ಪೋಷಕರು ಮತ್ತು ಕಾಲೇಜು ಆಡಳಿತ ಮಂಡಳಿಗಳು ಒತ್ತಾಯಿಸಿದ್ದವು. ತಜ್ಞರ ಸಮಿತಿಗಳಿಂದ ಒಂದು ವಾರದಲ್ಲಿ ವರದಿ ಪಡೆದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಭರವಸೆ ನೀಡಿತ್ತು. 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ಬಾರಿ ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು.


Share It

You cannot copy content of this page