ಉಪಯುಕ್ತ ಸುದ್ದಿ

ರಾಮನವಮಿ ದಿನದಂದೇ ಬೆಲ್ಲದ ಪಾನಕ ಹಂಚುವುದೇಕೆ? ಇದಕ್ಕಿದೆ ಆಧ್ಯಾತ್ಮಿಕ ಕಾರಣ…

Share It

ಚೈತ್ರ ನವರಾತ್ರಿಯ ಕೊನೆಯ ದಿನ ಅಂದರೆ ಈ ಬಾರಿ ಎ. 17 ರಂದು (ಇಂದು) ಭಾರತ ದೇಶಾದ್ಯಂತ ರಾಮ ನವಮಿಯನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಈ ದಿನ ವಿಷ್ಣುವು ರಾಮನ ಅವತಾರ ತಾಳಿದನು ಎಂಬ ನಂಬಿಕೆ ಇದೆ. ಶ್ರೀರಾಮನು ಉತ್ತರ ಭಾರತದ ಅಯೋಧ್ಯೆಯಲ್ಲಿ ಸೂರ್ಯವಂಶಿ ಇಕ್ಷವಾಕು ವಂಶಕ್ಕೆ ಸೇರಿದವನು. ಈ ದಿನವು ತ್ರೇತಾ ಯುಗದಲ್ಲಿ ರಾಜ ದಶರಥ ಮತ್ತು ಅವನ ಮೊದಲ ಪತ್ನಿ, ರಾಣಿ ಕೌಸಲ್ಯೆಗೆ ಜನಿಸಿದ ಶ್ರೀರಾಮನ ಜನ್ಮದಿನವಾಗಿದೆ.

ಶ್ರೀರಾಮನವಮಿ ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಹಬ್ಬ. ಈ ದಿನ ರಾಮನನ್ನು ಭಕ್ತಿಯಿಂದ ಪೂಜಿಸಿದರೆ ಕಷ್ಟ, ಕಾರ್ಪಣ್ಯಗಳು ದೂರವಾಗುತ್ತದೆ ಎಂಬ ನಂಬಿಕೆ ಇದೆ. ಇನ್ನು ನೈವೇದ್ಯದ ವಿಷಯಕ್ಕೆ ಬರುವುದಾದರೆ ಈ ಹಬ್ಬದ ದಿನ, ಕಡುಬು, ಪಾಯಸ, ಹೋಳಿಗೆ, ಚಕ್ಕುಲಿ ಮಾಡುವ ಬದಲು ಬೆಲ್ಲದ ಪಾನಕ, ಹೆಸರುಬೇಳೆ, ಕೋಸಂಬರಿ ಅಥವಾ ಕಿಚಡಿ, ಮಜ್ಜಿಗೆಯನ್ನು ನೈವೇದ್ಯ ಮಾಡಿ ಬಳಿಕ ಶ್ರೀರಾಮನ ಭಕ್ತರಿಗೆ ವಿತರಿಸಲಾಗುತ್ತದೆ. ಪುರಾಣಗಳಲ್ಲಿ ಹೇಳಿರುವ ಪ್ರಕಾರ ಈ ದಿನದಂದು ರಾಮನಿಗೆ ಬೆಲ್ಲದ ಪಾನಕ, ಮಜ್ಜಿಗೆ ಹಾಗೂ ಹೆಸರು ಬೇಳೆ ನೈವೇದ್ಯ ಮಾಡಿದಲ್ಲಿ ಆತ ಸಂತೃಪ್ತನಾಗುತ್ತಾನೆ ಎನ್ನಲಾಗಿದೆ. ಹಾಗಾದರೆ ಯಾಕೆ ಈ ರೀತಿಯ ನೈವೇದ್ಯವನ್ನು ರಾಮನಿಗೆ ಅರ್ಪಣೆ ಮಾಡಬೇಕು? ಇದರ ಹಿಂದಿರುವ ವೈಜ್ಞಾನಿಕ, ಧಾರ್ಮಿಕ ಕಾರಣವೇನು?

ಬೆಲ್ಲದ ಪಾನಕ ನೈವೇದ್ಯ ಮಾಡುವುದರ ಹಿಂದಿದೆ ವೈಜ್ಞಾನಿಕ, ಧಾರ್ಮಿಕ ಕಾರಣ!
ಚೈತ್ರಮಾಸ ಯಾವಾಗಲೂ ಅತ್ಯಂತ ಉಷ್ಣಾಂಶದಿಂದ ಕೂಡಿರುತ್ತದೆ. ಈ ಬಿಸಿಲ ಧಗೆಯಿಂದ ತತ್ತರಿಸುತ್ತಿರುವಾಗ ತಣ್ಣನೆಯ ಬೆಲ್ಲದ ಪಾನಕ, ಮಜ್ಜಿಗೆ, ಹೆಸರುಬೇಳೆ ಕಿಚಡಿ ಅಥವಾ ಕೋಸಂಬರಿಯ ಸೇವನೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಜೊತೆಗೆ ಈ ಪದಾರ್ಥಗಳು ದೇಹವನ್ನು ತಂಪಾಗಿಸುತ್ತದೆ ಎಂಬುದು ಇದರ ಹಿಂದಿರುವ ವೈಜ್ಞಾನಿಕ ಕಾರಣವಾಗಿದೆ. ಇನ್ನು ವಿಷ್ಣು ಪಾನಕ ಪ್ರೀಯ. ಇದನ್ನು ಪುರಾಣಗಳಲ್ಲಿಯೂ ವರ್ಣಿಸಲಾಗಿದೆ. ರಾಮ ಅವನ ಅವತಾರವಾಗಿರುವುದರಿಂದ ಅವನಿಗೆ ಪಾನಕ, ಮಜ್ಜಿಗೆಯನ್ನು ಅರ್ಪಣೆ ಮಾಡಲಾಗುತ್ತದೆ.


Share It

You cannot copy content of this page